Site icon Ullalavani

ರೈ ಮತ್ತು ಖಾದರ್ ಉಗ್ರಗಾಮಿಗಳೆಂದು ಹೇಳಿಕೆ ನೀಡಿದ ಬಿಜೆಪಿ ಮುಖಂಡನ ವಿರುದ್ಧ ದೂರು

UN NETWORKS

ಉಳ್ಳಾಲ: ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರನ್ನು ಉಗ್ರಗಾಮಿಗಳೆಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವಕಾಂಗ್ರೆಸ್ ವತಿಯಿಂದ ಸಹಾಯಕ ಪೊಲೀಸ್ ಆಯುಕ್ತರಲ್ಲಿ ದೂರು ಸಲ್ಲಿಸಲಾಯಿತು.

ತೊಕ್ಕೊಟ್ಟು ಕಲ್ಲಾಪುವಿನಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಅವರಲ್ಲಿ ದೂರು ಸಲ್ಲಿಸಿದ ಕಾರ್ಯಕರ್ತರು ಸಂಪುಟ ದರ್ಜೆಯ ಮಂತ್ರಿಗಳನ್ನು ಉಗ್ರಗಾಮಿಗಳು ಎಂದು ಹೇಳುತ್ತಾ, ಯಾವ ಭಯೋತ್ಪಾದಕರಿಗೂ ಕಡಿಮೆಯಿಲ್ಲ ಅನ್ನುವ ಹೇಳಿಕೆ ಸಾಂವಿಧಾನಿಕ ಹುದ್ದೆಗೆ ಅಗೌರವ ತೋರುವುದರ ಮೂಲಕ ಸರಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದರಿಂದ ಧರ್ಮಗಳ ನಡುವೆ ದ್ವೇಷ ಭಾವನೆ ಕೆರಳಿಸುವ ಕೆಲಸವಾಗಿದೆ. ಇದು ಸಮಾಜದ ಸಾಮರಸ್ಯಕ್ಕೆ ಭಂಗ ಹಾಗೂ ಮಂತ್ರಿಗಳ ವ್ಯಕ್ತಿತ್ವ , ಹೆಸರಿಗೆ ಹಾಗೂ ಘನತೆಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಯಾಗಿದೆ. ದೇಶದ್ರೋಹಿ ಹೇಳಿಕೆ ನೀಡಿರುವ ರವಿ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ನಿಯೋಗದಲ್ಲಿ ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಪ್ರ.ಕಾ.ಗಳಾದ ನಾಸಿರ್ ಸಾಮಣಿಗೆ, ಗೋಪಾಲ್ ತಚ್ಚಣಿ, ಯುವಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಅನ್ಸಾಫ್ ಸಿಲಿಕೋನಿಯ , ಯುವಕಾಂಗ್ರೆಸ್ ಉಪಾಧ್ಯಕ್ಷ ರಿಯಾಝ್ ಅಹಮ್ಮದ್ ಪಾವೂರು, ಸಮೀರ್ ಪಜೀರ್, ಅವಿಲ್ ತೊಕ್ಕೊಟ್ಟು , ರಿವೇನ್ ಸೋಮೇಶ್ವರ, ಅಶ್ರಫ್ ಕೋಟೆಪುರ ಉಪಸ್ಥಿತರಿದ್ದರು.

Exit mobile version