ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ವಿವಿಧ ಇಲಾಖೆಗಳ ಅಧಿಕಾರಿಗಳು ಕರ್ತವ್ಯಗಳನ್ನು ದುರುಪಯೋಗಪಡಿಸದೇ ಇದ್ದಲ್ಲಿ ಜನರಿಗೆ ಯಾವುದೇ ಅನ್ಯಾಯವಾಗದು ಎಂದು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಮತ್ತು ಸುನ್ನೀ ಜಮಾಅತಿನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಹೇಳಿದ್ದಾರೆ.
ಎಸ್ ವೈಎಸ್ ಫಲಾಹ್ ಮದನಿನಗರ ಇದರ ವತಿಯಿಂದ ಪ್ರವಾದಿ ನಿಂದನೆ, ತೊಕ್ಕೊಟ್ಟು ಮಂಗಳೂರು ಒನ್ ಶಾಲೆ ವಿದ್ಯಾರ್ಥಿನಿ ಅತ್ಯಾಚಾರ ಯತ್ನ, ಮಸೀದಿ ಮತ್ತು ಚರ್ಚ್ಗಳ ಮೇಲೆ ದಾಳಿ, ಮಸೀದಿ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿಯಿಂದ ಅಜ್ಞಾನಿ ಹೇಳಿಕೆ ವಿರುದ್ಧ ಕುತ್ತಾರು ಜಂಕ್ಷನ್ನಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿಗಳು ಶಾಯಿಯನ್ನು ದುರುಪಯೋಗಪಡಿಸಿ ಜನರಿಗೆ ಅನ್ಯಾಯವೆಸಗಿದಲ್ಲಿ, ಮುಂದೆ ಅದು ಅವರಿಗೆ ಮುಳುವಾಗುವುದರಲ್ಲಿ ಸಂಶಯವಿಲ್ಲ. ದೇಶದ ಕೋಟ್ಯಂತರ ಜನರು ನಂಬುವ ಪ್ರವಾದಿಗೆ ನಿಂದನೆ, ಶ್ರೀ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರು ಅಜ್ಞಾನಿಗಳು. ಅಂತಹವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಿದೆ. ಅನ್ಯಾಯ ಎದುರಾದಾಗ ಎಲ್ಲರೂ ಎಚ್ಚೆತ್ತು ಹೋರಾಟ ನಡೆಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಚ್ಚೆತ್ತುಕೊಂಡಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಸಾಧ್ಯ ಎಂದರು.
ಎಸ್ಎಸ್ಎಫ್ ರಾಜ್ಯ ಮುಖಂಡ ಸಿದ್ದೀಖ್ ಮೋಂಟುಗೋಳಿ ಮಾತನಾಡಿ ಶಿಕ್ಷಣ ವಲಯ ಅನಿಸಿಕೊಂಡಿರುವ ಉಳ್ಳಾಲ ಪ್ರದೇಶ ಜಾಗತಿಕ ಮಟ್ಟದಲ್ಲಿ ದಾಖಲೆ ಸಾಧಿಸಿದೆ. ಇಂತಹ ಪರಿಸರದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುವುದು ಹೆದರಿಕೆಯ ವಿಷಯ. ಹೆಣ್ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಒಂದೆಡೆ ಒತ್ತಾಯ ಕೇಳುತ್ತಿದ್ದರೆ, ಶಿಕ್ಷಣ ಪಡೆಯಬೇಕಾದ ಹೆಣ್ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ದೆಹಲಿಯಲ್ಲಿ ನಡೆದ ಅರೆವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ವಿಶ್ವದಾದ್ಯಂತ ಸುದ್ಧಿಯಾದರೆ, ತೊಕ್ಕೊಟ್ಟುವಿನಲ್ಲಿ ನಡೆದ ಬಾಲಕಿ ಅತ್ಯಾಚಾರ ಯತ್ನ ಪ್ರಕರಣ ಯಾಕೆ ಸುದ್ಧಿಯಾಗಿಲ್ಲ. ಇಲ್ಲಿ ನ್ಯಾಯ ಸಿಗಬೇಕಾದರೆ ಜೀವಗಳು ಬಲಿಯಾಗಬೇಕೇ? ಎಂದು ಪ್ರಶ್ನಿಸಿದ ಅವರು. ವಿಶ್ವಸಂಸ್ಥೆಯೂ ಪ್ರಶಂಸಿಸುವಂತಹ ಭಾರತೀಯ ಪೊಲೀಸರನ್ನು ಇಲ್ಲಿ ದುರುಪಯೋಗಪಡಿಸುತ್ತಿರುವುದರಿಂದ ಅನ್ಯಾಯಗಳು ನಿರಂತರ ನಡೆಯುತ್ತಿದೆ ಎಂದರು.
ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ ದೌರ್ಜನ್ಯ ನಡೆಯದ ರೀತಿಯಲ್ಲಿ ಆಡಳಿತ ನಡೆಸಬೇಕಾಗಿದೆ ಸರಕಾರ. ಆದರೆ ಪ್ರಕರಣಗಳ ಸತ್ಯಾಸತ್ಯತೆಯನ್ನು ಮರೆಮಾಚುವ ಸರ್ಕಾರ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದರು.
ಈ ಸಂದರ್ಭ ರಾಣಿಪುರ ಚರ್ಚ್ನ ಪಾಲನಾ ಸಮಿತಿ ಉಪಾಧ್ಯಕ್ಷ ಫೆಲಿಕ್ಸ್ ಮೊಂತೇರೊ, ಮದನಿನಗರ ಜಮಾಅತಿನ ಅಧ್ಯಕ್ಷ ಯು.ಕೆ.ಮಹಮ್ಮದ್, ಉಳ್ಳಾಲ ದರ್ಗಾ ಸಮಿತಿ ಸದಸ್ಯ ರವೂಫ್, ಆಸೀಫ್, ಅಬ್ದುಲ್ ಅಝೀಝ್, ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.