Site icon Ullalavani

ಹಕ್ಕುಪತ್ರ ವಿತರಣೆಯಿಂದ ಸರ್ಕಾರಕ್ಕೆ ಆದಾಯ: ಯು.ಟಿ.ಖಾದರ್

UN NETWORKS

ಉಳ್ಳಾಲ: ಸರ್ಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ವಾಸವಿರುವ ಬಡವರಿಗೆ ಹಕ್ಕುಪತ್ರ ವಿತರಿಸಲು ಹಣದ ಅವಶ್ಯಕತೆಯಿಲ್ಲ, ಅದರ ಬದಲು ಸರ್ಕಾರಕ್ಕೇ ಆದಾಯ ಬರುವಂತಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಉಳ್ಳಾಲ ನಗರಸಭಾ ಮಹತ್ಮಾ ಗಾಂಧಿ ರಂಗಮಂದಿಯಲ್ಲಿ ಬುಧವಾರ ನಡೆದ ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಶೇ.24.10, 3 ಮತ್ತು 7.25ರಡಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳು ಹಾಗೂ 94ಸಿಸಿಯಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲೇ ಬಡವರ ಮನೆಗಳಿಗೆ ಭದ್ರತೆ ನೀಡುವ ಹಕ್ಕುಪತ್ರ ವಿತರಿಸುವಂತೆ ವಿದಾನಸಭೆಯಲ್ಲಿ ಮನವಿ ಮಾಡಲಾಗುತ್ತಿತ್ತು. ಆದರೆ ಆ ಸಂದರ್ಭ ಆಡಳಿತ ನಡೆಸುತ್ತಿದ್ದ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ನಮ್ಮ ಮನವಿ ಕೇಳುವ ಪುರುಸೊತ್ತೇ ಇರಲಿಲ್ಲ ಎಂದು ವ್ಯಂಗ್ಯವಾಡಿದರು.

ನಗರ ಸಭಾಧ್ಯಕ್ಷ ಹುಸೈನ್ ಕುಂಞಮೋನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಕಲಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಜೇನ್ ಶಾಂತಿ ಡಿಸೋಜ, ಸದಸ್ಯರಾದ ಫಾರೂಕ್ ಉಳ್ಳಾಲ್, ಉಸ್ಮಾನ್ ಕಲ್ಲಾಪು, ಮುಸ್ತಫಾ ಅಬ್ದುಲ್ಲಾ, ದಿನೇಶ್ ರೈ ಉಳ್ಳಾಲಗುತ್ತು, ಮಹಮ್ಮದ್ ಮುಕಚ್ಚೇರಿ, ಇಸ್ಮಾಯಿಲ್ ಪೊಡಿಮೋನು, ಯು.ಎ.ಇಸ್ಮಾಯಿಲ್, ಬಾಝಿಲ್ ಡಿಸೋಜ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ, ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಸಂಘಟನಾ ಕಾರ್ಯದರ್ಶಿ ಸಲೀಂ ಮೇಘಾ ಇನ್ನಿತರರು ಉಪಸ್ಥಿತರಿದ್ದರು.

ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು.

`ಸರ್ವರಿಗೂ ಸಮಪಾಲು ಸಿಗಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶ, ಗುಡ್ಡಗಾಡು ಪ್ರದೇಶದಲ್ಲೂ ವಾಸವಿರುವವರು ಅನ್ನಕ್ಕಾಗಿ ಇನ್ನೊಬ್ಬರ ಬಳಿ ಕೈ ಚಾಚಬಾರದು ಎನ್ನುವ ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ, ಇದೇ ರೀತಿ ಹಲವಾರು ಯೋಜನೆಗಳನ್ನು ಜನಸಮಾನ್ಯರ ಅಭ್ಯುದಯಕ್ಕಾಗಿ ಜಾರಿಗೆ ತರಲಾಗಿದೆ’
ಯು.ಟಿ.ಖಾದರ್, ಆಹಾರ ಸಚಿವ

 

Exit mobile version