Site icon Ullalavani

ಮಾ. 4ರಂದು ಮುಡಿಪಿನಲ್ಲಿ ಸಚಿವ ಯು.ಟಿ. ಖಾದರ್ ಸಾರ್ವಜನಿಕ ಅಭಿನಂದನೆ

UN NETWORKS

ಮುಡಿಪು: ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸುಮಾರು ನೂರು ಕೋಟಿಗೂ ಮಿಕ್ಕಿ ಅನುದಾನ ಮಂಜೂರು ಮಾಡಿರುವ ಸಚಿವ ಯು.ಟಿ. ಖಾದರ್ ಅವರು ತನ್ನ ಶಾಸಕತ್ವದ ಮೂರು ಅವಧಿಯಲ್ಲಿ ಹಾಗೂ ಸಚಿವರಾಗಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯ ನಡೆಸಿದ್ದು ಆ ನಿಟ್ಟಿನಲ್ಲಿ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸರ್ವ ಜನಾಂಗದ ನಾಗರಿಕ ಬಂಧುಗಳಿಂದ ಮಾ. 4ರಂದು ಸಂಜೆ 4.00ಗಂಟೆಗೆ ಸಚಿವ ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನೆ, ಸನ್ಮಾನ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು.

ಮುಡಿಪು ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಖಾದರ್ ಅವರ ಕೊಡುಗೆ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೂ ಬಹಳಷ್ಟು ಅನುದಾನ ಮಂಜೂರು ಮಾಡಿಸಿದ್ದಾರೆ. ಇಂದಿರಾ ಗಾಂಧಿ ಕ್ಯಾಂಟಿನ್, ಹರೀಶ್ ಸಾಂತ್ವನ ಯೋಜನೆ, 94ಸಿ ಹಾಗೂ 94ಸಿಸಿ ಯಡಿಯಲ್ಲಿ ಹಕ್ಕುಪತ್ರ ಕೊಡಿಸುವ ಮೂಲಕ ಮಂಗಳೂರು ಕ್ಷೇತ್ರಕ್ಕೆ ಬಹುಪಾಲು ಅನುದಾನ ಒದಗಿಸಿ ಕೊಟ್ಟಿದ್ದಾರೆ. ಕುರ್ನಾಡು ಕಾಲೇಜಿಗೆ ಪದವಿ ಕಾಲೇಜು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಪೂರ್ವ ಅವರು ಜನತೆಗೆ ಕೊಟ್ಟ ಭರವಸೆಗಳಲ್ಲಿ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 95ಶೇ. ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ವರ್ಷಗಳ ಬೇಡಿಕೆ ಇದ್ದ ಪಡಿತರ ಚೀಟಿ ವಿತರಣೆ ಸಮಸ್ಯೆ ನೀಗಿಸಿದ್ದಾರೆ. ಅತ್ಯದ್ಭುತ ಕಾರ್ಯಕ್ರಮ ಜನತೆಗೆ ಕೊಟ್ಟಿದ್ದು ಸರಕಾರಿ ಗೋಮಾಳ ಮೊದಲಾದ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕುಪತ್ರ ಕೊಡುವ ಮೂಲಕ ಅತಂತ್ರ ಸ್ಥಿತಿಯಲ್ಲಿದ್ದವರಿಗೆ ನೆಲೆಯ ಭದ್ರತೆ ನೀಡಿದ್ದಾರೆ. ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬಹಳಷ್ಟು ಯೋಜನೆ ತಂದಿದ್ದಾರೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಬಹಳಷ್ಟು ರಸ್ತೆ ನಿರ್ಮಾಣ ಮಾಡಿದ್ದಾರೆ. ಆ ಎಲ್ಲ ಕಾರ್ಯಕ್ರಮಗಳಿಂದ ಸಂತಸ ಗೊಂಡಿರುವ

ಜನತೆ ಬಹಳ ಪ್ರೀತಿಯಿಂದ ಸಚಿವರನ್ನು ಸನ್ಮಾನಿಸಲು ಮಂದಾಗಿದ್ದು ಸಾರ್ವಜನಿಕರು ಯಶಸ್ವಿಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತೋಡುಗೋಳಿ ಮಹಾಬಲೇಶ್ವರ ಭಟ್, ಬೇಕಲ ಉಸ್ತಾದ್ ಸೇರಿದಂತೆ ಧಾರ್ಮಿಕ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ವಕ್ಪ್ ಜಿಲ್ಲಾ ಸಮಿತಿ ಸದಸ್ಯ ಉಮರ್ ಪಜೀರು, ಡಾ. ಸುರೇಖ, ಉದ್ಯಮಿ ಇಮ್ತಿಯಾಝ್ ಹಾಗೂ ರಹ್‍ಮಾನ್ ಉಪಸ್ಥಿತರಿದ್ದರು.

Exit mobile version