Site icon Ullalavani

ತಾಳ್ಮೆಯಿಲ್ಲದ ಸವಾರರು : ಪರದಾಡಿದ ಜನತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ನೂತನ ನೇತ್ರಾವತಿ ಸೇತುವೆ ಕಾಮಗಾರಿ ಮುಗಿದು ಮುಂದೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಪಂಪ್‍ವೆಲ್ ನಡುವಿನ ಬ್ಲಾಕ್ ಸಮಸ್ಯೆ ಬಗೆಹರಿಯಿತು ಎಂದು ಜನತೆ ನಿಟ್ಟುಸಿರು ಬಿಟ್ಟಿದ್ದರೆ, ಇದೀಗ ಮತ್ತೆ ಹಳೇ ಸೇತುವೆ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು, ಶನಿವಾರ ದಿನವಿಡೀ ನಡೆದ ರಸ್ತೆ ತಡೆಗೆ ತಾಳ್ಮೆಯಿಲ್ಲದ ವಾಹನ ಸವಾರರೇ ಕಾರಣರಾದರು.

ಹಳೆಯ ನೇತ್ರಾವತಿ ಸೇತುವೆಯ ದುರಸ್ತಿ ಕಾರ್ಯ ಕಳೆದ ಕೆಲ ದಿನಗಳಿಂದ ಆರಂಭವಾಗಿದೆ. ಇದರ ಜತೆಗೆ ಸೇತುವೆಯನ್ನು ತಾಗಿಕೊಂಡು ಜೆಪ್ಪಿನಮೊಗರು ಮತ್ತು ಕಲ್ಲಾಪು ಭಾಗದ ಅರ್ಧ ಕಿ.ಮೀಗಳಷ್ಟು ರಸ್ತೆಗಳ ಕಾಮಗಾರಿಯೂ ನಡೆಯುತ್ತಿದೆ. ಅದಕ್ಕಾಗಿ ನೂತನ ನೇತ್ರಾವತಿ ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ದ್ವಿಚಕ್ರ ವಾಹನ ಸವಾರರು ಸಹಿತ ಸಣ್ಣ ವಾಹನಗಳು ಎಲ್ಲೆಂದರೆಲ್ಲಿ ತಾಳ್ಮೆಯಿಲ್ಲದೆ ಸೇತುವೆಯಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.

ಶನಿವಾರದ ದಿನ ಆಗಿದ್ದರಿಂದ ಮಧ್ಯಾಹ್ನ ಸಮಯದಲ್ಲಿ ವಿದ್ಯಾರ್ಥಿಗಳು, ಕೆಲಸ ಬಿಟ್ಟು ತೆರಳುವವರು ಬಸ್ಸುಗಳಲ್ಲಿ ತುಂಬಿದ್ದರಿಂದ ಸುಡುಬಿಸಿಲಿನಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿ ಬಸ್ಸಿನೊಳಗಡೆ ಗಂಟೆಗಳ ಕಾಲ ಒಣಗುವಂತಾಯಿತು. ತೊಕ್ಕೊಟ್ಟು ಭಾಗದಲ್ಲಿ ಅಂಬಿಕಾರೋಡುವರೆಗೆ, ಜೆಪ್ಪಿನಮೊಗರು , ಮಾರ್ಗನ್ಸ್‍ಗೇಟ್‍ವರೆಗೂ ವಾಹನಗಳು ಸರತಿ ಸಾಲಿನಲ್ಲಿತ್ತು.

ಒಂದು ಭಾಗದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು, ಇನ್ನೊಂದೆಡೆ ಉಳ್ಳಾಲ ಪೊಲೀಸರು ಸಂಚಾರ ಸುಗಮಗೊಳಿಸಲು ಪ್ರಯತ್ನಪಟ್ಟರೂ ವಾಹನ ದಟ್ಟಣೆ ಹೆಚ್ಚಿದ್ದರಿಂದಾಗಿ ಸಂಜೆವರೆಗೂ ಸಾಧ್ಯವಾಗಲಿಲ್ಲ. ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ ತೆರಳುವವರು ಹಾಗೂ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Exit mobile version