Site icon Ullalavani

ವಿಜ್ಞಾನಕ್ಕಿಂತ ಸನಾತನ ಭಿನ್ನ- ಒಡಿಯೂರು ಶ್ರೀ

UN NETWORKS

ತಲಪಾಡಿ: ಆಧುನಿಕ ಬದುಕಿನ ಅಗತ್ಯತೆ ಕಂಡಾಗ ಕೆಲವು ಭಾಷೆಗಳು ನಮಗೆ ಅನಿವಾರ್ಯವೇನೋ ಸರಿ. ಆದರೆ ನಮ್ಮದು ಎಂಬ ನಮ್ಮ ಬದುಕುವ ಧರ್ಮವಾಗಿರುವ ಸನಾತನವನ್ನು ಮರೆಯದೆ ನೂತನ ಅಧ್ಯಯನ ಮಾಡುವುದು ತಪ್ಪಲ್ಲ ಅಷ್ಟಕ್ಕೂ ವಿಜ್ಞಾನದಲ್ಲಿ ದಿನನಿತ್ಯ ಬದಲಾವಣೆ ಆಗುತ್ತಿದ್ದು ಆಧ್ಯಾತ್ಮಿಕದಲ್ಲಿ ಬದಲಾವಣೆ ಎಂಬುದು ಇಲ್ಲ. ಅದು ಯಾವ ಕಾಲಕ್ಕೂ ಬದಲಾಗದು. ಹಾಗಾಗಿ ವಿಜ್ಞಾನಕ್ಕಿಂತ ಸನಾತನ ಭಿನ್ನ ಎಂದು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಟ್ಟರು.

ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ಧೂಮಾವತೀ ಬಂಟ ದೈವಸ್ಥಾನದ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಯಾವುದೇ ಧರ್ಮ ಸರ್ವರ ಸಕಲರ ಅಭ್ಯುದಯಕ್ಕಾಗಿ ಇರುವುದು, ಇರಬೇಕು. ಧರ್ಮವಿಲ್ಲದೆ ಬದುಕಿಲ್ಲ. ಧರ್ಮವಿಲ್ಲದ ಬದುಕು ನೀರಿನಿಂದ ಮೇಲೆ ಬಂದ ಮೀನಿನಂತೆ. ಹಕ್ಕಿ ಆಕಾಶದಲ್ಲಿ ಹಾರಾಡುತ್ತಾ ನೀರಿನಲ್ಲಿ ಈಜುವ, ಮೀನು ನೀರಿನಲ್ಲಿ ಈಜುತ್ತಾ ಬಾನಂಚಿನಲ್ಲಿ ಹಾರಾಡುವ ಕನಸುಕಾಣುವುದುರಿಂದ ಯಾವುದೇ ಬದಲವಾಣೆ ಸಿಗದು. ಯಾಕೆಂದರೆ ಮೀನು ನೀರಿನಿಂದ ಹೊರಬಂದರೆ ಬದುಕದು,ಹಕ್ಕಿ ನೀರಿನಲ್ಲಿ ಮುಳುಗುತ್ತಾ ಬದುಕಲು ಸಾಧ್ಯವಿಲ್ಲ. ಮೀನು ಈಜುತ್ತಿರಬೇಕು, ಹಕ್ಕಿ ಹಾರುತ್ತಿರಬೇಕು ಅದು ಪ್ರಕೃತಿ ಧರ್ಮ ಎಂದು ನುಡಿದರು.

ಕರಾವಳಿಯ ಜನತೆಯಲ್ಲಿ ದಾನಧರ್ಮ ಮಾಡುವ ಮನಸ್ಸು ಇನ್ನೂ ದೊಡ್ಡ ಪ್ರಮಾಣದಲ್ಲಿ ಇರುವುದರಿಂದಾಗಿ ಸಮಾಜದಲ್ಲಿ ಅದೆಷ್ಟೋ ಕ್ಷೇತ್ರಗಳು ಜೀರ್ಣೋದ್ಧಾರ ಪುನರ್ ನವೀಕರಣಗೊಳ್ಳಲು ಸಾಧ್ಯವಾಗಿದೆ. ನಾನು ಎಂಬ ಭಾವ ಹೋಗಬೇಕು. ಹಾಗೆಯೇ ನಮ್ಮ ಬೇಡಿಕೆಗಳ ಮೇಲೆ ಹಿಡಿತವಿದ್ದರೆ ನಮಗೆ ಸಹಜವಾಗಿಯೇ ಶಾಂತಿ ದೊರಕುವುದು. ಜ್ಞಾನ ಸಂಪಾದನೆಗೆ ಗುರು ಬೇಕು ಹೊರತು ಗೂಗಲ್ ಅಲ್ಲ, ಅದುವೇ ಅನಿವಾರ್ಯವಾಗಬಾರದು. ಯಾಂತ್ರಿಕತೆಗೆ ನಾವು ಬಲಿಯಾಗಬಾರದು. ಅಪಾಯದಲ್ಲಿ ಸಿಲುಕಿರುವ ವ್ಯಕ್ತಿಯನ್ನು ಬದುಕಿಸುವುದು ಬಿಟ್ಟು ಅದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲು ಬಿಡುವುದು ಶೋಭೆಯಲ್ಲ, ಮೊದಲಾಗಿ ಜೀವ ರಕ್ಷಣೆ ಮುಖ್ಯ ಎಂದು ನುಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದೂ ಧರ್ಮದ ನಂಬಿಕೆ ಬಹಳ ಶ್ರೇಷ್ಟವಾದ ನಂಬಿಕೆ. ಈ ನಂಬಿಕೆಯ ಆಧಾರದಲ್ಲಿ ಬದುಕಿ ದೈವಾರಾಧನೆಯಂತಹ ಕಾರ್ಯವನ್ನು ನಡೆಸುವವರು. ನಮ್ಮಲ್ಲಿ ಅಸ್ಪಶ್ಯತೆ ಇಲ್ಲವೆಂಬುದನ್ನು ದೈವಾರಾಧನೆಯ ಮೂಲಕ ನಾವು ತೋರಿಸಿಕೊಟ್ಟಿದ್ದೇವೆ. ಇಲ್ಲಿ ಸಾಮಾಜಿಕ ನ್ಯಾಯ ನೀಡುವ ಕಾರ್ಯ ನಡೆಯುತ್ತದೆ. ಕೋಮುವಾದಿಗಳು ಎನ್ನುವುದಕ್ಕೂ ಉದ್ಯಾವರದ ಮಾಡದಲ್ಲಿ ನಾವು ಮೊದಲ ಗೌರವ ನೀಡುವುದು ಅಲ್ಲಿಯ ಮಸೀದಿಯ ಫಕೀರರಿಗೆ ಎಂದ ಅವರು ತುಳುನಾಡಿನ ದೈವಾರಾಧನೆ ಸಾಂಸ್ಕøತಿಕವಾದ ಪರಂಪರೆಯೊಂದಿಗೆ ಒಂದು ಶ್ರೇಷ್ಠವಾದ ನಂಬಿಕೆಯಾಗಿದೆ ಎಂದರು.
ಕೆನರಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್ ಧಾರ್ಮಿಕ ಉಪನ್ಯಾಸಗೈದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಜಯಪಾಲ್ ಶೆಟ್ಟಿ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿ, ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆಸಲ್ಲಿಸಿದ ಪ್ರಮುಖರನ್ನು ಹಾಗೂ ದೈವದ ಪಾತ್ರಿಗಳನ್ನು ಸನ್ಮಾನಿಸಲಾಯಿತು.
ಸಚಿವ ಯು.ಟಿ. ಖಾದರ್, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸುಬ್ಬಯ್ಯ ಮಾರ್ಲ ಉಳಿಪಾಡಿಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯ, ಮಲರಾಯ ದೈವದ ಪಾತ್ರಿ ಅಂತ ಪೂಜಾರಿ ಭಂಡಾರಮನೆ, ಕುತ್ತಾರುಗುತ್ತು ಚಂದ್ರಹಾಸ ಅಡ್ಯಂತಾಯ, ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಉದ್ಯಮಿ ಶಶಿಧರ್ ಶೆಟ್ಟಿ ಮಂಗಳೂರು, ಸಂತೋಷ್ ಕುಮಾರ್ ರೈ ಬೋಳಿಯಾರು, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮೂಕಾಂಬಿಕಾ ಕನ್ ಸ್ಟ್ರಕ್ಷನ್ಸ್‍ನ ಚಂದ್ರಹಾಸ್ ಪಂಡಿತ್‍ಹೌಸ್, ಗಿರೀಶ್ ಆಳ್ವ ಮೋರ್ಲ ಹಾಗೂ ಉದ್ಯಮಿ ಪ್ರಭಾಕರ ಶೆಟ್ಟಿ ಕಿನ್ಯಗುತ್ತು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ನ್ಯಾಯವಾದಿ ಬಿ. ರವೀಂದ್ರನಾಥ ರೈ ಸಾಂತ್ಯ ಗಡದಗುತ್ತು ಸ್ವಾಗತಿಸಿದರು.
ಸಂತ ಸೆಬೆಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ಹಾಗೂ ಸುಕೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಂಟ ಬೊಲ್ಯಗುತ್ತು ವಂದಿಸಿದರು.

Exit mobile version