Site icon Ullalavani

ದೇರಳಕಟ್ಟೆ: ನಾಸಾಕರ್ಣಕಂಠಶಾಸ್ತ್ರ ವಿಭಾಗದಿಂದ ಕಾರ್ಯಗಾರ

UN NETWORKS

ಉಳ್ಳಾಲ: ಭಾರತದಲ್ಲಿ ಹಿಂದಿನ ಕಾಲದಲ್ಲಿ ಮರದಡಿಯಲ್ಲಿ ಪಾಠ ಹೇಳಿ ಕೊಡುತ್ತಿದ್ದ ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಹಂತಹಂತವಾಗಿ ಇಲ್ಲಿ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು. ಹಾಗಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ವಿವಿಧ ಆವಿಷ್ಕಾರಗಳು ನಿತ್ಯವೂ ನಡೆಯುತ್ತಿದೆ. ಹಾಗೆಯೇ ವಿದ್ಯಾರ್ಥಿಗಳ ಬುದ್ಧಿವಂತಿಕೆ ಜ್ಞಾನ ವಿವಿಧ ಬಗೆಯ ವಿವಿಧ ಪರೀಕ್ಷೆಯಲ್ಲಿ ಉತ್ತರಿಸುವ ಮೂಲಕ ಸಾದರಗೊಳ್ಳುವುದು ಎಂದು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಯ ಸಹಕುಲಾಧಿಪತಿ ಪ್ರೊ. ಎಂ ಶಾಂತಾರಾಮ ಶೆಟ್ಟಿ ಹೇಳಿದರು.

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಾಸಾಕರ್ಣಕಂಠಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಮಂಗಳವಾರ ಜರಗಿದ ಕ್ಷೇಮ ಇಎನ್ ಟಿ ಒಎಸ್ ಸಿ ಇ ಕಾರ್ಯಗಾರ -2018 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸೆ ಉಪನ್ಯಾಸ ಹಾಗೂ ಹದಿನಾಲ್ಕನೆಯ ಒಎಸ್ ಸಿ ಇ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿ ವೈದ್ಯರ ಪಾಲಿಗೆ ದೇವರು. ವೈದ್ಯರು ರೋಗಿಗಳಿಂದಲೇ ಕಲಿಯುವುದು. ಹಾಗಾಗಿ ರೋಗಿಯನ್ನು ದೇವರಂತೆ ಕಾಣಬೇಕು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಅತಿ ಮುಖ್ಯವಲ್ಲ. ಜ್ಞಾನ , ಕೌಶಲ್ಯ ವೃದ್ಧಿಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದ ಕುರಿತು ನಿರಂತರ ಅಧ್ಯಯನಶೀಲತೆ ಬೇಕು. ಮಾಹಿತಿ ಸಿಗುತ್ತದೆ ಎಂದು ಗೂಗಲ್ ನ್ನು ನೂರು ಶೇ. ನಂಬುವಂತಿಲ್ಲ. ಐದರಿಂದ ಹತ್ತು ಶೇ. ಮಾಹಿತಿಗಳು ತಪ್ಪಾಗಿದೆ. ಕ್ಷೇಮ ವತಿಯಿಂದ ನಡೆಯುತ್ತಿರುವ ಕಾರ್ಯಗಾರದಲ್ಲಿ ಪಾಲ್ಗೊಳ್ಳುತ್ತಿರುವ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಸಿಗುವಂತಾಗಲಿ ಎಂದು ಆಶಿಸಿದರು.

ಸಂಪನ್ಮೂಲ ವ್ಯಕ್ತಿ ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದ ಇ ಎನ್ ಟಿ ವಿಭಾಗ ಮುಖ್ಯಸ್ಥ ಪ್ರೊ. ಮುರಲೀಧರ ನಂಬೂದರಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಬಗೆ ಹಾಗೂ ಇಂಟರ್ವ್ಯೂಗೆ ಹೇಗೆ ಸಿದ್ಧತೆ ಇರಬೇಕು ಎಂಬ ಕುರಿತಾಗಿ ವಿವರಿಸಿ, ಮೊದಲಾಗಿ ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಮನನ ಮಾಡಿಕೊಳ್ಳಬೇಕು ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ನಾವು ಗುರುತಿಸುವಂತಹ ಸಾಧನೆ ಮಾಡಬೇಕಾದರೆ ಕಠಣ ಪರಿಶ್ರಮ ಒಂದೇ ದಾರಿ. ಹಾಗೆಯೇ ತಾವು ಅಧ್ಯಯನ ನಡೆಸುವ ವಿಷಯ ಕುರಿತು ನಡೆಯುತ್ತಿರುವ ಕಾರ್ಯಗಾರ ಹಾಗೂ ಸಮ್ಮೇಳನದಲ್ಲಿ ಭಾಗವಹಿಸಬೇಕು. ಅದರಿಂದಾಗಿ ಹೆಚ್ಚಿನ ಜ್ಞಾನ ಸಂಪಾದನೆ ಸಾಧ್ಯವಾಗುತ್ತದೆ ಎಂದರು.

ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಗಾರದಲ್ಲಿ ಡಾ. ರಾಜೇಶ್ವರಿ ಸ್ವಾಗತಿಸಿದರು. ಡಾ. ರಾಜಶೇಖರ್ ವಂದಿಸಿದರು.

Exit mobile version