Site icon Ullalavani

ರಂಗ ಭೂಮಿ ದೇಹ ಮತ್ತು ಆತ್ಮಗಳ ಸಮರಸ

UN NETWORKS

ಕೊಣಾಜೆ: ರಂಗಭೂಮಿ ದೇಹ ಮತ್ತು ಆತ್ಮಗಳ ಸಮರಸದ ಸಂಯೋಗದಿಂದ ರೂಪುಗೊಳ್ಳುವ ಕಲೆ. ಕಲಾವಿದನ ಭಾವಾಭಿನಯ, ಪರಕಾಯ ಪ್ರವೇಶ ಹಾಗೂ ಪಾತ್ರ ತಾದಾತ್ಮ್ಯಗಳು ಮನರಂಜನೆಯ ಜೊತೆಗೆ ಮನೋವಿಕಾಸವನ್ನುಂಟು ಮಾಡುತ್ತದೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಸದಾನಂದ ಸುವರ್ಣ ಹೇಳಿದರು.

ಅವರು ಗುರುವಾರ ಮುಂಬಯಿ ವಿಶ್ವವಿದ್ಯಾನಿಲಯದಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಯೋಗದೊಂದಿಗೆ ಮುಂಬಯಿ ವಿಶ್ವವಿದ್ಯಾನಿಲಯದ ಜೆ.ಪಿ ನಾಯಕ್ ಸಭಾಭವನದಲ್ಲಿ ನಡೆದ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ಮುಂಬಯಿ ಕನ್ನಡ ರಂಗಭೂಮಿಯ ಕುರಿತು ಮಾತನಾಡಿದರು.

ಮುಂಬಯಿಯಲ್ಲಿ ಮರಾಠಿ ರಂಗಭೂಮಿ ಮತ್ತು ಕನ್ನಡ ರಂಗಭೂಮಿ ಕೊಡುಕೊಳ್ಳುವಿಕೆಯ ಮೂಲಕ ಬೆಳೆದಿದ್ದು ಆಧುನಿಕ ಮರಾಠಿ ಚಲನಚಿತ್ರ ರಂಗಕ್ಕೆ ಸಾಕಷ್ಟು ಪ್ರೇರಣೆಗಳನ್ನು ಒದಗಿಸಿದೆ. ವರ್ತಮಾನದಲ್ಲಿ ಸಂಘಟಕರ ಕೊರತೆ ರಂಗಭೂಮಿಯ ಚಟುವಟಿಕೆಗಳ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂದರು.

ಸಮಾರಂಭದಲ್ಲಿ ಮುಂಬಯಿ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ. ಜಿ. ಎನ್ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಮತ್ತು ಮುಂಬಯಿಯ ನಡುವೆ ನಿಕಟ ಸಂಬಂಧವಿದ್ದು ಸಾಂಸ್ಕøತಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಂಪರ್ಕಗಳು ಗಾಢಗೊಳ್ಳಬೇಕು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ. ಪೂರ್ಣಿಮಾ ಎಸ್ ಶೆಟ್ಟಿ ನಿರೂಪಿಸಿದರು. ಸಂವಾದದಲ್ಲಿ ಚಂದ್ರಶೇಖರ ಪಾಲೆತ್ತಾಡಿ, ದಯಾನಂದ ಸಾಲ್ಯಾನ್, ಕವಿ ಗೋಪಾಲ್ ತ್ರಾಸಿ, ರಂಗಭೂಮಿ ಕಲಾವಿದೆ ಮಮತಾರಾವ್, ಸ. ದಯಾ, ಲೇಖಕಿ ಶ್ಯಾಮಲಾ ಮಾಧವ್, ಸತೀಶ್ ಬಂಗೇರ, ಈಶ್ವರ ಅಲೆವೂರು, ಡಾ. ಜಿ.ವಿ ಕುಲಕರ್ಣಿ, ಡಾ. ವಿಶ್ವನಾಥ ಕಾರ್ನಾಡ್, ಶ್ರೀಧರ ರಾವ್, ಕೆ.ಕೆ ಶೆಟ್ಟಿ, ಕೊಲ್ಯಾರು ರಾಜು ಶೆಟ್ಟಿ, ಎಸ್ ಕೆ ಕುಂದರ್, ಹರೀಶ್ ಪೂಜಾರಿ, ಕರುಣಾಕರ ಹೆಜಮಾಡಿ, ರೋನ್ಸ್ ಬಂಟ್ವಾಳ, ಯಜ್ಞನಾರಾಯಣ ಸುವರ್ಣ, ಮಧುಸೂದನ್ ಹಾಗೂ ವಿಭಾಗದ ವಿದ್ಯಾರ್ಥಿಗಳು ಸಂಶೋಧಕರು ಭಾಗವಹಿಸಿದರು.

ಜಾಹೀರಾತು

ಕವಿಸಮಯ
ಅಪರಾಹ್ನ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವತಿಯಿಂದ ನಡೆದ ಕವಿಸಮಯದಲ್ಲಿ ಕವಿ ಡಾ. ಧನಂಜಯ ಕುಂಬ್ಳೆ ಅವರು ಭಾಗವಹಿಸಿದರು. ಹಿಂದಿನ ಕಾವ್ಯ ಪರಂಪರೆಯ ಸಮಷ್ಟಿ ಮನೋಧರ್ಮ ಇಂದು ಮಾಯವಾಗಿದ್ದು ಕವಿಗಳಲ್ಲಿ ವ್ಯಷ್ಟಿ ಮನೋಧರ್ಮ, ಪ್ರತಿಕ್ರಿಯಾಶೀಲತೆಯೇ ಪ್ರಮುಖವಾಗಿದೆ ಎಂದ ಅವರು ತಮ್ಮ ಕೊಳಲು, ಮೊನಾಲಿಸಾ, ಅಬ್ಬಲಿಗೆ, ಕುಕ್ಕರ್ ಮೊದಲಾದ ಕವಿತೆಗಳನ್ನು ವಾಚಿಸಿದರು. ಸಮಾರಂಭದಲ್ಲಿ ಎಚ್ ಬಿ ಎಲ್ ರಾವ್ ಸಂಪಾದಿಸಿದ ಮುಂಬಯಿ ಕನ್ನಡ ಪರಿಚಾರಕ ಎಸ್ ಕೆ ಕುಂದರ್ ಅವರ ಅಭಿನಂದನಾ ಕೃತಿಯನ್ನು ಸದಾನಂದ ಸುವರ್ಣ ಇವರು ಬಿಡುಗಡೆಗೊಳಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್ ಶೆಟ್ಟಿ ಕೃತಿ ಪರಿಚಯ ಮಾಡಿದರು.

Exit mobile version