Site icon Ullalavani

ಕಣಚೂರು ಆಸ್ಪತ್ರೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋ ಡಾ.ಆಲಿ ಇರಾನಿ

UN NETWORKS

ಉಳ್ಳಾಲ: ಕುತ್ತಿಗೆ ಮತ್ತು ಬೆನ್ನು ನೋವು ಇರುವವರು ಭಾರತೀಯ ಫಿಸಿಯೋಥೆಪಿಯೆನ್ನರ ಅನ್ನದಾತರಾಗಿದ್ದು , ಅದನ್ನು ` ಚಮತ್ಕಾರ್ ಕಾ ನಮಸ್ಕಾರ್ ‘ ರೀತಿಯಲ್ಲಿ ಗುಣಪಡಿಸಿದಲ್ಲಿ ರೋಗಿ ಗುಣಮುಖನಾಗಲು ಸಾಧ್ಯ ಎಂದು ಮುಂಬೈ ನಾನಾವತಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋ ಡಾ.ಆಲಿ ಇರಾನಿ ಹೇಳಿದ್ದಾರೆ.

ಅವರು ನಾಟೆಕಲ್ ಕಣಚೂರು ಫಿಸಿಯೋಥೆರಪಿ ಕಾಲೇಜು , ಸೌತ್ ಕೆನರಾ ಫಿಸಿಯೋಥೆರಪಿ ಉಪನ್ಯಾಸಕರ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ನಾಟೆಕಲ್ ಕಣಚೂರು ಆಡಿಟೋರಿಯಂನಲ್ಲಿ ಮಂಗಳವಾರ ಜರಗಿದ ಮಂಗಳೂರು ಫಿಸಿಯೋಕಾನ್ -2018 ಅಂಗವಾಗಿ ಭಾರತದಲ್ಲಿ ಫಿಸಿಯೋಥೆರಪಿ, ದೈಹಿಕ ಬಲಾಢ್ಯತೆ ಮತ್ತು ಕ್ರೀಡೆ ಔಷಧಿ ಹಾಗೂ ಶೀಘ್ರ ಪರಿಹಾರಗಳ ಪ್ರಸ್ತುತ ತಂತ್ರ ವಿಚಾರಗಳ ಕುರಿತ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಹೆಚ್ಚಾಗಿ ಕುತ್ತಿಗೆ ಮತ್ತು ಬೆನ್ನು ನೋವು ಕಾಡುವ ಜನರೇ ಹೆಚ್ಚಿದ್ದಾರೆ. ಫಿಸಿಯೋಥೆರಪಿಗಳನ್ನು ಹೆಚ್ಚಾಗಿ ಭೇಟಿ ಮಾಡುವವರು ಅವರೇ ಆಗಿರುತ್ತಾರೆ. ಆದರೆ ಒಂದೇ ದಿನದಲ್ಲಿ ಗುಣಮುಖರಾಗಬೇಕು ಅನ್ನುವ ಮನಸ್ಥಿತಿಯಿಂದ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳನ್ನು ಪ್ರಥಮ ದಿನದ ಚಿಕಿತ್ಸಾ ವಿಧಾನದ ಮೂಲಕ ಪರಿಹರಿಸಿದಲ್ಲಿ ಫಿಸಿಯೋಥೆರಪಿಗಳು ಜೀವನ ನಿರ್ವಹಣೆ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಮಂಗಳೂರು ಇದರ ಅಧ್ಯಕ್ಷ ಡಾ.ಕೆ.ಆರ್ ಕಾಮತ್ ಮಾತನಾಡಿ ಕೌಶಲ್ಯ ವೃದ್ಧಿಗೆ ಸಿಗುವಂತಹ ಅವಕಾಶಗಳನ್ನು ಪ್ರಾಧ್ಯಾಪಕರು ಸದುಪಯೋಗಪಡಿಸಿಕೊಳ್ಳಬೇಕಿದೆ. ಯುವಸಮುದಾಯ ರೋಗಿಗಳ ಜತೆಗೆ ಉತ್ತಮ ಬಾಂಧವ್ಯದ ಜತೆಗೆ ಇತರೆ ವಿಭಾಗದವರ ಜತೆಗಿನ ಉತ್ತಮ ಸಂಪರ್ಕ ಇರಿಸಿಕೊಳ್ಳುವುದರ ಮೂಲಕ ಕ್ಷೇತ್ರದಲ್ಲಿ ಪ್ರಸ್ತುತ ಎದುರಾಗುತ್ತಿರುವ ತೊಂದರೆಗಳಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ವಿ.ವಿಗಳ ಸಿಂಡಿಕೇಟ್ ಸದಸ್ಯ ಡಾ.ಇಫ್ತಿಕಾರ್ ಅಲಿ ಮುಖ್ಯ ಅತಿಥಿಯಾಗಿದ್ದರು. ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡೀನ್ ಡಾ.ಹೆಚ್.ಯಸ್.ವಿರೂಪಾಕ್ಷ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದೇವಿಪ್ರಸಾದ್ ಉಪಸ್ಥಿತರಿದ್ದರು.

ಸೆರಿಂಗ್ ಡ್ರೋಮಾ ಕಾರ್ಯಕ್ರಮ ನಿರೂಪಿಸಿದರು. ಕಣಚೂರು ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದ್ ಸುಹೈಲ್ ಸ್ವಾಗತಿಸಿದರು. ಡಾ.ರೇಷ್ಮಾ ವಂದಿಸಿದರು.

Exit mobile version