Site icon Ullalavani

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಚಿತ್ರಕಲಾ ಶಿಕ್ಷಣ ಪೂರಕ

ಮಂಗಳೂರು:  ಚಿತ್ರಕಲಾ ಶಿಕ್ಷಣ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ. ಸಮರ್ಥ ಕಲಾ ಶಿಕ್ಷಕನೊಬ್ಬ ಏನೂ ಅಲ್ಲದ ವಿದ್ಯಾರ್ಥಿಯನ್ನೂ ಮುಗಿಲೆತ್ತರಕ್ಕೆ ಬೆಳೆಸಬಲ್ಲವನಾಗಿದ್ದು ಮಕ್ಕಳ ಮಾನಸಿಕ ನೆಮ್ಮದಿಗೆ ಕಾರಣನಾಗಿರುತ್ತಾನೆ ಎಂದು ಡಯಟ್‍ನ ಪ್ರಾಂಶುಪಾಲರಾದ ಶ್ರೀ ಸಿಪ್ರಿಯನ್ ಮೊಂತೆರೋ ತಿಳಿಸಿದರು.
ಅವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ಸಂಘದ ತಿಂಗಳ ಕಾರ್ಯಾಗಾರವನ್ನು ನಗರದಲ್ಲಿ ಉದ್ಘಾಟಿಸಿ ಮಾತಾನಾಡಿದರು.
ಮುಖ್ಯ ಅತಿಥಿಗಳಾಗಿ ಕಲಾವಿದ ಬಿ.ಗಣೇಶ ಸೋಮಯಾಜಿ ಚಿತ್ರಕಲಾ ಶಿಕ್ಷಕರು ಕಾಲಕ್ಕೆ ತಕ್ಕ ಬದಲಾಗುತ್ತಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿದ್ಯಾರ್ಥಿಗಳು ಇನ್ನೂ ಎತ್ತರಕ್ಕೆ ಬೆಳೆಯುವುದಕ್ಕೆ ಕಾರಣರಾಗಬೇಕು ಎಂದರು.
ತಿಂಗಳ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಚಿತ್ರಕಲಾ ಶಿಕ್ಷಕ ಶ್ರೀ ಭೋಜ ಹಾಂಡ ನಿರಂತರ ಮತ್ತು ವ್ಯಾಪಕಮೌಲ್ಯ ಮಾಪನದ ಬಗ್ಗೆ ಮಾರ್ಗದರ್ಶನ ನೀಡಿದರು. ಜಿಲ್ಲೆಯ ಸುಮಾರು 100 ಮಂದಿ ಚಿತ್ರಕಲಾ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡರು.


ಅಧ್ಯಕ್ಷರಾಗಿ ಮಾತನಾಡಿದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಮಹಾಬಲ ಕುಳ “ಆಶಾವಾದಿಯಾಗಿ ಜೀವನ ನಡೆಸುವವನು ಕನಸುಗಳ ಹೊರುತ್ತಾನೆ. ಚಿಂತನೆಗಳನ್ನು ಮಾಡುತ್ತಾನೆ. ಚಿತ್ರಕಲಾ ಶಿಕ್ಷಕರು ಇದಕ್ಕೆ ಮಾದರಿಯಾಗಿದ್ದಾರೆ ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತುಳು ಪಠ್ಯ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಕರಾಗಿ ಸಾಧನೆಗೈದ ಶ್ರೀ ದಿನೇಶ್ ಶೆಟ್ಟಿಗಾರ್ ಮತ್ತು ವರ್ಲಿಕಲೆಯ ಪ್ರಶಂಸೆಗಾಗಿ ತಾರಾನಾಥ್ ಕೈರಂಗಳ್ ಇವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ಬಿ.ಇ. ಎಮ್ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಮಾಧವ .ಎ ಸ್ವಾಗತಿಸಿದರು. ಬೆಸೆಂಟ್ ಪ್ರೌಢಶಾಲೆಯ ಶ್ರೀ ಅಶೋಕ್ ಲಂಬಾಣಿ ವಂದಿಸಿದರು. ತಾರಾನಾಥ್ ಕೈರಂಗಳ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version