UN NETWORKS
ಉಳ್ಳಾಲ: ದೀಪಕ್ ರಾವ್ ಮೃತದೇಹವಿದ್ದ ವಾಹನದ ಮೇಲೆ ನಿಂತು ಭಾಷಣ ಮಾಡುವವರು ಹೆಣದ ಮೇಲೆ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿದ್ದು, ಮಾನವೀಯತೆಯನ್ನು ಕೊಲ್ಲುವ ಕೆಲಸ ಜಿಲ್ಲೆಯಲ್ಲಿ ಆಗುತ್ತಿದ್ದು, ಇದನ್ನು ಗಟ್ಟಿಗೊಳಿಸುವ ಪ್ರಯತ್ನ ಜನತೆಯಿಂದ ಆಗಬೇಕಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದ್ದಾರೆ.
ಕೋಮುವಾದ ಮತೀಯವಾದದ ಹೆಸರಿನಲ್ಲಿ ದಾಳಿ ದಬ್ಬಾಳಿಕೆಗಳು ನಿರಂತರವಾಗಿ ನಡೆದು ಜಿಲ್ಲೆಯ ಹೆಸರನ್ನು ಹಾಳು ಮಾಡುತ್ತಿದೆ. ಧರ್ಮಗಳ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಿ , ಅಧಿಕಾರದ ಖುರ್ಚಿಗೆ ಅಮಾಯಕರ ಕೊಲೆ ನಡೆಸಿ ಸಮಾಜದ ಅಶಾಂತಿಗೆ ಹಲವರು ಕಾರಣರಾಗುತ್ತಿದ್ದಾರ. ಇದರಿಂದಾಗಿ ಜನರ ನಡುವೆ ಅಪನಂಬಿಕೆ ಸೃಷ್ಟಿ ಮಾಡುವ ತುಳುನಾಡಿನ ಸೌಹಾರ್ದತೆಗೆ ಏಟನ್ನು ನೀಡುವ ಕೆಲಸ ಆಗಿದೆ. ಮತೀಯವಾದದ ಹೆಸರಿನಲ್ಲಿ ನಡೆಯುವ ಕೊಲೆಗಳಿಂದಾಗಿ ಭಾವೈಕ್ಯತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.
ಬಾಬರಿ ಮಸೀದಿ ಸಂದರ್ಭ ಸುರತ್ಕಲ್ ನಲ್ಲಿ ಆರಂಭವಾದ ಗಲಭೆ, ಉಳ್ಳಾಲದಲ್ಲಿ ನಡೆದು ಅನೇಕ ಅಮಾಯಕರು ಜೀವ ಕೊಟ್ಟಿದ್ದಾರೆ. ಮತ್ತೆ ಅದನ್ನೇ ಮುಂದುವರಿಸುವ ಷಡ್ಯಂತ್ರ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಆದರೆ ದುಷ್ಕೃತ್ಯ ಎಸಗುವವರು ಕ್ರಿಮಿನಲ್ ಗಳನ್ನೇ ಹುಡುಕಿ ಕೊಲ್ಲುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಅಮಾಯಕರನ್ನೇ ಹತ್ಯೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಹತರಾದ ದೀಪಕ್ ಮತ್ತು ಬಶೀರ್ ಅವರ ಮನೆಮಂದಿ , ವಿದೇಶದಲ್ಲಿರುತ್ತಿದ್ದರೆ ಬದುಕುಳಿಯುತ್ತಿದ್ದರು ಅನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇದರಿಂದ ಭಾರತ ಬದುಕಲು ಸುರಕ್ಷಿತವಲ್ಲ ಅನ್ನುವ ಮನೋಭಾವ ಜನರಲ್ಲಿ ಮೂಡುವ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನವಾಗಬೇಕಿದೆ. ಹತ್ತಿರದ ಇತರೆ ಧರ್ಮದವರ ಜತೆಗ ಅನ್ಯೋನ್ಯತೆಯಿಂದ ಬಾಳುವ ಸ್ಥಿತಿ ಮರುಕಳಿಸಬೇಕು ಎಂದರು.
ಈ ಸಂದರ್ಭ ಮುಖಂಡರುಗಳಾದ ಕೃಷ್ಣಪ್ಪ ಸಾಲ್ಯನ್, ಜಯಂತ್ ನಾಯ್ಕ್, ಜೀವನರಾಜ್ ಕುತ್ತಾರ್ ಎಸ್ ಎಫ್ ಐ ನಾಯಕ ನಿತಿನ್, ವಿಕಾಸ್, ವಾಸುದೇವ ಉಚ್ಚಿಲ್, ಸುನಿಲ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.