UN NETWORKS
ಉಳ್ಳಾಲ: ಗ್ರಾಮದ ಜನರೊಂದಿಗೆ ಬೆರೆಯುತ್ತಾ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿಯಲ್ಲಿ ಇದ್ದ ಗೌರವಕ್ಕಾಗಿ ಅವರಿಗೆ ಎರಡು ಬಾರಿ ಬಂದಿದ್ದ ವರ್ಗಾವಣೆ ಆದೇಶವನ್ನು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ತಡೆದಿತ್ತು ಎಂದು ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ ವಳಚ್ಚಿಲ್ ಹೇಳಿದ್ದಾರೆ.
ಉನ್ನತ ವ್ಯಾಸಾಂಗಕ್ಕಾಗಿ ತೆರಳುತ್ತಿರುವ ಅಭಿವೃದ್ಧಿ ಅಧಿಕಾರಿಗಳೇ ಮುಂದೆ ಪಂಚಾಯಿತಿಗೆ ಇ.ಓ ಆಗಿ ಬರಬೇಕು ಅನ್ನುವ ಆಶಯ ಗ್ರಾಮಸ್ಥರದ್ದಾಗಿದೆ. ಕಳೆದ ಏಳೂವರೆ ವರ್ಷಗಳ ದೀರ್ಘಾವಧಿಯನ್ನು ಒಂದೇ ಪಂಚಾಯಿತಿನಲ್ಲಿ ಯಶಸ್ವಿಯಾಗಿ ಪೂರೈಸಿದ ಏಕೈಕ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಆಗಿದ್ದಾರೆ. ಅವರ ಕಾಲಾವಧಿಯಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ನಡೆದಿದ್ದು, ಇದು ಗ್ರಾಮದ ಏಳಿಗೆಗೆ ಪೂರಕವಾಗಿತ್ತು ಎಂದರು.
ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಅಧಿಕಾರಿ ಪರಮೇಶ್ವರ್ ಭಂಡಾರಿ ಇವರು ಗ್ರಾಮೀಣಾಭಿವೃದ್ಧಿ ಕುರಿತ ವಿಶ್ವವಿದ್ಯಾಲಯ ಗದಗದಲ್ಲಿ ಇತ್ತೀಚೆಗೆ ಸ್ಥಾಪನೆಯಾಗಿದೆ. ರಾಜ್ಯದಲ್ಲಿ 25 ಮಂದಿ ಅಭಿವರದ್ಧಿ ಅಧಿಕಾರಿಗಳಿಗೆ ವಿದ್ಯಾಭ್ಯಾಸ ಪಡೆಯುವ ಅವಕಾಶ ದೊರೆತಿದ್ದು, ಅದರಲ್ಲಿ ತಾನೂ ಆಯ್ಕೆಯಾಗಿರುವುದಾಗಿ ತಿಳಿಸಿದ ಅವರು ಪಂಚಾಯಿತಿನಲ್ಲಿದ್ದ ಸಿಬ್ಬಂದಿ ತಂಡ , ಹಿರಿಯರ ಮಾರ್ಗದರ್ಶನ ಹಾಗೂ ಸದಸ್ಯರ ಒಗ್ಗೂಡುವಿಕೆಯಿಂದ ಗ್ರಾಮದ ಕೆಲ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ. ಜನರ ಸೇವೆಯನ್ನೇ ಗುರಿಯನ್ನಾಗಿಸಿಕೊಂಡ ಅಧ್ಯಕ್ಷರು ಹಾಗೂ ಅವರ ;ಕಾರ್ಯಚಟುವಟಿಕೆ ಉತ್ಸುಕರಾಗಿ ಕೆಲಸಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು ಎಂದರು.
ಈ ಸಂದರ್ಭ ಉಪಾಧ್ಯಕ್ಷೆ ಮರಿಯಮ್ಮ, ಸದಸ್ಯರಾದ ಕುಂಞಬಾವ ಎ.ಎಂ, ಇಸ್ಮಾಯಿಲ್ ದೊಡ್ಡಮನೆ, ಎಂ.ಇಲ್ಯಾಸ್, ಎ.ಎಂ ಇಸ್ಮಾಯಿಲ್, ಮಹಮ್ಮದ್ ಆಸಿಫ್, ಸ್ಟೀಫನ್ ಎಡ್ವರ್ಡ್ ವಾಸ್, ಮಾಜಿ ಅಧ್ಯಕ್ಷೆ ಜೆಸಿಂತಾ ಪ್ರಮೀಳಾ ಡಿಸೋಜಾ, ಹಿರಿಯರಾದ ಅಹಮ್ಮದ್ ಕುಂಞ, ಇಬ್ರಾಹಿಂ ಬಂಡಸಾಲೆ ಮೊದಲಾದವರು ಉಪಸ್ಥಿತರಿದ್ದರು.
ಮಂಜಪ್ಪ.ಹೆಚ್ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಹನೀಫ್ .ಎನ್ ವಂದಿಸಿದರು.