Site icon Ullalavani

ಬೋಳಿಯಾರು ಸರಕಾರಿ ಬಸ್ ಗೆ ತಡೆಯಾಜ್ಞೆ : ಗ್ರಾಮಸ್ಥರಿಂದ ಪ್ರತಿಭಟನೆ

UN NETWORKS

ಬೋಳಿಯಾರು : ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡೇ ಸರಕಾರಿ ಬಸ್ಸನ್ನು ಕಾಟಾಚಾರಕ್ಕೆ ಹಾಕಿರುವ ಸರಕಾರ, ಇದೀಗ ನ್ಯಾಯಾಲಯದಲ್ಲಿ ಕಲೆಕ್ಷನ್ ಬರುತ್ತಿಲ್ಲ ಎಂಬ ಕಾರಣ ನೀಡಿ ತಡೆಯಾಜ್ಞೆ ತಂದಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.

ಅವರು ಮುಡಿಪು-ಬೋಳಿಯಾರಿನ ಕೆಎಸ್ ಆರ್ ಟಿಸಿ ಬಸ್ಸು ಹೋರಾಟ ಸಮಿತಿ ಹಾಗೂ ಸಾರ್ವಜನಿಕರ ವತಿಯಿಂದ ಅಮ್ಮೆಂಬಳ ದರ್ಗಾದಿಂದ ಮಂಗಳೂರಿಗೆ ಹೋಗಲು ಪರ್ಯಾಯ ಸರಕಾರಿ ಬಸ್ಸು ವ್ಯವಸ್ಥೆಯನ್ನು ಮಾಡಲು ಒತ್ತಾಯಿಸಿ ಬೋಳಿಯಾರು ಗ್ರಾಮ ಪಂಚಾಯತ್ ಎದುರು ಸೋಮವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾರ್ವಜನಿಕರ ದೂರಿಗೆ ಸ್ಪಂಧಿಸಿ ಕಾಟಾಚಾರಕ್ಕೆ ಬೋಳಿಯಾರು ಕಡೆಗೆ ಸರಕಾರಿ ಬಸ್ಸು ಹಾಕಲಾಗಿತ್ತು. ಆದರೆ ಮೊದಲಿಗೆ ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 72 ಗಂಟೆಗಳಲ್ಲಿ ಸರಕಾರಿ ಬಸ್ಸು ಬಾರದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಅವರು ಈವರೆಗೆ ಒಂದು ಇದ್ದ ಬಸ್ಸಿನ ಸಂಖ್ಯೆ ಎರಡಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಸೇರಿದಂತೆ ಕೆ.ಎಸ್.ಆರ್ ಟಿ.ಸಿ ಆಯುಕ್ತರಿಗೂ ನಿರಂತರವಾಗಿ ಮನವಿ ಸಲ್ಲಿಸಿದ ಫಲವಾಗಿ ಹಲವು ವರ್ಷಗಳ ಬಳಿಕ ಸರಕಾರಿ ಬಸ್ಸು ಮಂಜೂರಾಗಿತ್ತು. ಆದರೆ ಇದೀಗ ಖಾಸಗಿ ಬಸ್ಸು ಮಾಲೀಕರ ಧೋರಣೆಯಿಂದ ಅದೂ ನಿಂತಿದೆ. ಇದರಿಂದ ವಿದ್ಯಾರ್ಥಿಗಳು ಸಹಿತ ದಿನನಿತ್ಯ ಕೆಲಸಕ್ಕೆ ಹೋಗುವವರಿಗೆ ಅಡಚಣೆಯುಂಟಾಗಿದೆ. ಶೀಘ್ರವೇ ಸರಕಾರಿ ಬಸ್ಸನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಪಾಸ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ ಎಂದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬೋಳಿಯಾರು ಗ್ರಾ.ಪಂ ಅಧ್ಯಕ್ಷ ಸತೀಶ್ ಆಚಾರ್ಯ ಮಾತನಾಡಿ ತಡೆಯಾಜ್ಞೆ ಬಳಿಕ ಪಂಚಾಯಿತಿನಲ್ಲಿ ನಿರ್ಣಯ ಕೈಗೊಂಡು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಸ್ಪಂಧಿಸದಿರುವುದರಿಂದ ಆರ್ ಟಿ ಎ ಆಯುಕ್ತರು ಖಾಸಗಿ ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆಯೇ ಅನ್ನುವ ಸಂಶಯ ವ್ಯಕ್ತವಾಗುತ್ತಿದೆ. ಎರಡು ದಿನದಲ್ಲಿ ಬಸ್ಸು ಬಾರದಿದ್ದಲ್ಲಿ ಪ್ರತಿಭಟನೆ ನಡೆಸಿ ಜೈಲಿಗೆ ಹೋಗಲು ಸಿದ್ಧ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಪಂ.ಸದಸ್ಯ ಪ್ರಶಾಂತಗ ಗಟ್ಟಿ, ಗ್ರಾ.ಪಂ ಸದಸ್ಯರಾದ ಟಿ.ರಿಯಾಝ್ , ವಿದ್ಯಾಶ್ರೀ ಶೆಟ್ಟಿ, ಪಾವುಲ್ ಡಿಸೋಜ,
ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಇಸ್ಮಾಯಿಲ್ ಕಡುವಾಯಿ, ಜಯಂತ್ ಪಾದಲ್ಪಾಡಿ, ನಿತಿನ್ ಗಟ್ಟಿ ಕುರ್ನಾಡು ಗ್ರಾ.ಪಂ ಉಪಾಧ್ಯಕ್ಷ, ನವೀನ್ ಶೆಟ್ಟಿ ಕೊಡಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.

Exit mobile version