UN NETWORKS
ಉಳ್ಳಾಲ: ತಾಯಿಯಲ್ಲಿರುವ ಪ್ರತಿಯೊಂದು ಅಂಶಗಳು ಮಗುವಿಗೆ ಹಾಲುಣಿಸುವ ಮೂಲಕ ದೊರೆಯುವ ಹಿನ್ನೆಲೆಯಲ್ಲಿ ಸತತ ಆರು ತಿಂಗಳುಗಳ ಕಾಲ ತಾಯಂದಿರು ಮಕ್ಕಳಿಗೆ ಮೊಲೆಹಾಲು ಒದಗಿಸುವುದು ಸೂಕ್ತ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಪೋಷಣೆ ಮತ್ತು ಪಥ್ಯಶಾಸ್ತ್ರ, ಮಕ್ಕಳ ವಿಭಾಗ ಮತ್ತು ಎನ್ಎಸ್ಪಿಇಸಿಸಿ ವಿಭಾಗಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹ-2017 (ನ್ಯಾಷನಲ್ ನ್ಯೂಟ್ರಿಷಿಯನ್ ವೀಕ್) ಕುರಿತ ಒಂದು ವಾರ ನಡೆಯಲಿರುವ `ಮಗುವಿನ ಉತ್ತಮ ಆರೋಗ್ಯಕ್ಕಾಗಿ’ ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮಕ್ಕೆ ಎ. ಬಿ.ಶೆಟ್ಟಿ ದಂತ ಕಾಲೇಜಿನ ತ್ರಿಂಶತಿ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿರುವ ಪೌಷ್ಠೀಕರಣ ವೃದ್ಧಿಸಲು ತಾಯಿ ಹಾಲಿನಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಪೌಷ್ಠಿಕತೆ ದಿನಾಚರಣೆಯನ್ನು ಮಾಡುವ ಮೂಲಕ ತಾಯಂದಿರಿಗೆ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನಾರ್ಹ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಗುಂಗಿನ ತಾಯಂದಿರು ಮಗು ಹುಟ್ಟಿಸಿದ ನಂತರದ ಎರಡೇ ತಿಂಗಳುಗಳಲ್ಲಿ ಮೊಲೆ ಹಾಲನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಹಲವು ತೊಂದರೆಗಳು ಎದುರಾಗಬಹುದಲ್ಲದೆ, ಪೌಷ್ಠಿಕಾಂಶದ ಕೊರತೆಯೂ ಉಂಟಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಹಾಲುಣಿಸುವ ವೇಳೆ ತಾಯಂದಿರಿಗೆ ಎದುರಾಗುವ ತೊಂದರೆಗಳ ಕುರಿತು ಪರಿಹಾರವನ್ನು ಶಿಬಿರದಲ್ಲಿ ನೀಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಎಸ್. ರಮಾನಂದ ಶೆಟ್ಟಿ ಮಾತನಾಡಿ ಪೌಷ್ಠಿಕಾಂಶದ ಕೊರತೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಿದರು.
ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಎ. ಬಿ. ಶೆಟ್ಟಿ ದಂತ ವಿದ್ಯಾಲಯಗಳ ಡೀನ್ ಡಾ. ಯು. ಯಸ್. ಕೃಷ್ಣ ನಾಯಕ್, ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ್, ವೈದ್ಯಕೀಯ ಕಾಲೇಜಿನ ವೈಸ್ ಡೀನ್ ಡಾ. ಪಿ. ಎಸ್. ಪ್ರಕಾಶ್, ಮಕ್ಕಳ ವಿಭಾಗದ ವಿಭಾಗ ಮುಖ್ಯಸ್ಥೆ ಡಾ. ವಿಜಯ ಶೆಣೈ, ಸಂಪನ್ಮೂಲ ವ್ಯಕ್ತಿಗಳಾಗಿ ಪೀಡೊಡಾಂಟಿಕ್ಸ್ ವಿಭಾಗ ಮುಖ್ಯಸ್ಥೆ ಡಾ. ಅಮಿತಾ ಹೆಗ್ಡೆ, ಡಾ. ಸೀಮಾ ಪವಮಾನ್, ಡಾ. ಶರ್ಮಿಳಾ ಭಟ್ ಭಾಗವಹಿಸಿದ್ದರು.
ವೈದ್ಯರುಗಳಾದ ಡಾ. ಶ್ರೀಪಾದ್, ಡಾ. ಸಂದೀಪ್ ರೈ, ನರ್ಸಿಂಗ್ ಸುಪರಿಟೆಂಡೆಂಟ್ ಡಾ. ಶರ್ಲಿ ಉಪಸ್ಥಿತರಿದ್ದರು. ಎನ್ ಎಸ್ ಪಿಇಸಿಸಿಯ ಮಕ್ಕಳು ಹಾಗೂ ಮಂಗಳೂರಿನ ಕಾಪಿಕಾಡು, ಬಿಕರ್ನಕಟ್ಟೆ, ಬಂದರು ಸರಕಾರಿ ಶಾಲಾ ಮಕ್ಕಳು , ಪೋಷಕರು ಹಾಗೂ ಶಿಕ್ಷಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಡಾ. ಪ್ರೇರಣಾ ಹೆಗ್ಡೆ ಸ್ವಾಗತಿಸಿದರು. ಯಶೋಧಾ ಕೆ. ಕೆ. ಕಾರ್ಯಕ್ರಮ ನಿರ್ವಹಿಸಿದರು. ತನುಜಾ ವಂದಿಸಿದರು.