UN NETWORKS
ಉಳ್ಳಾಲ; ಬೈಕ್ ರ್ಯಾಲಿಯಲ್ಲಿ ಮಂಗಳೂರು ಕ್ಷೇತ್ರದಿಂದ 4,000ದಷ್ಟು ಬೈಕಿನಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಎಷ್ಟು ತಡೆದರೂ ಸಾಂವಿಧಾನಿಕ ಹಕ್ಕಾದ ಪ್ರತಿಭಟನೆಯನ್ನು ಯುವ ಕಾರ್ಯಕರ್ತರು ಜಿಲ್ಲಾ ಮತ್ತು ರಾಜ್ಯ ಮುಖಂಡರುಗಳ ನೇತೃತ್ವದಲ್ಲಿ ಮಾಡಿಯೇ ಸಿದ್ಧ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.
ಶಾಂತಿಯುತವಾಗಿ ನಡೆಯುವ ಪ್ರತಿಭಟನೆಗೆ ಅಡ್ಡಿಯುಂಟು ಮಾಡಿದಲ್ಲಿ, ಮುಂದೆ ನಡೆಯುವ ಕಾಂಗ್ರಸ್ ನ ಶಾಂತಿಗಾಗಿ ಪಾದಯಾತ್ರೆಗೆ ತೊಂದರೆಯಾಗಬಹುದು. ಹಿಂದೆ ಬಿಜೆಪಿ ಸರಕಾರವಿದ್ದಾಗ ಉಳ್ಳಾಲದಿಂದ ಬಳ್ಳಾರಿಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬಿಜೆಪಿ ಸರಕಾರವೇ ಭದ್ರತೆಯನ್ನು ಒದಗಿಸಿತ್ತು. ಆದರೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಭದ್ರತೆ ಒದಗಿಸಲಾಗದವರು ಅಡ್ಡಿಪಡಿಸುವುದರಲ್ಲಿ ಅರ್ಥವಿಲ್ಲ. ಯುವಮೋರ್ಚಾದ ಯುವ ಕಾರ್ಯಕರ್ತರು ಯಾರಿಗೂ ಬಗ್ಗುವವರಲ್ಲ, ಜಗ್ಗುವವರಲ್ಲ ಎದೆಯೊಡ್ಡಿ ನಿಲ್ಲುವವರು. ಯಾವುದೇ ಧರ್ಮದ ವಿರುದ್ಧ ಹೋರಾಟವಲ್ಲ, ಶಾಂತಿಯುತವಾದ ಹೋರಾಟವಾಗಿದೆ ಎಂದರು.
ಈ ಸಂದರ್ಭ ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಯುವಮೋರ್ಚಾ ಅಧ್ಯಕ್ಷ ಸುಜಿತ್ ಮಾಡೂರು, ಮನೋಜ್ ಆಚಾರ್ಯ ಉಪಸ್ಥಿತರಿದ್ದರು.