UN NETWORKS
ಹರೇಕಳ: ಹರೇಕಳ ಶ್ರೀ ರಾಮಕೃಶ್ಣ ಪ್ರೌಢಶಾಲೆಯ ಸೌಜನ್ಯ ಸ್ಕೌಟ್ ದಳದ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಶ್ರೀ ಕೃಷ್ಣನ ಸಂದೇಶವನ್ನು ತಿಳಿಸಿದ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯವರು ಭಗವಾನ್ ಶ್ರೀ ಕೃಷ್ಣನ ಜೀವನಾದರ್ಶಗಳು ಮಾನವ ಬದುಕಿಗೆ ದಾರಿ ದೀಪವಾಗಿದೆ. ಈತನು ಓರ್ವ ಪರಿಸರ ಪ್ರೇಮಿ. ಪರಿಸರದಲ್ಲಿರುವ ನೀರು, ಗಾಳಿ, ಮಣ್ಣು, ಮರಗಿಡಗಳು, ಪ್ರಾಣಿ ಪಕ್ಷಿಗಳಲ್ಲಿಯೂ ದೇವತಾಂಶವಿದೆ ಎಂಬುದನ್ನು ತೋರಿಸಿಕೊಟ್ಟವನು.
ನರಕಾಸುರನ ಸೆರೆಮನೆಯಿಂದ ಮುಕ್ತಗೊಳಿಸಿ ಅನಾಥ ಮಹಿಳೆಯರಿಗೆ ರಕ್ಷಣೆ ನೀಡಿದವನು. ಅನಾಥ ಮಹಿಳೆಯರ ರಕ್ಷಣೆ ನಮ್ಮ ಧರ್ಮವಾಗಿರಬೇಕು, ತ್ಯಾಗ ಮತ್ತು ಪರೋಪಕಾರ ನಮ್ಮ ದಿನನಿತ್ಯದ ಕಾರ್ಯವಾಗಿರಬೇಕು, ಭೇದ ಮರೆತು ಎಲ್ಲರೊಡಗೂಡಿ ಬದುಕುವುದೇ ನಮ್ಮ ಜೀವನವಾಗಬೇಕು ಎಂಬುದು ಭಗವಾನ್ ಶ್ರೀ ಕೃಷ್ಣನ ದಿವ್ಯ ಸಂದೇಶವಾಗಿದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಂತೋಜಕ ಸ್ಕೌಟ್ ಮಾಸ್ಟರ್ ತ್ಯಾಗಂ ರವರು ಶೈಕ್ಷಣಿಕ ವರ್ಷದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ಕ್ರಿಸ್ಮಸ್ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಆಚರಿಸಲ್ಪಡುತ್ತಿದ್ದು, ಪ್ರತಿಯೊಂದು ಹಬ್ಬದಲ್ಲಿ ಮಹಾತ್ಮರ ಹುಟ್ಟುಹಬ್ಬದ ಮಹತ್ವ, ಹಾಗೂ ಅವರು ಸಮಾಜಕ್ಕೆ ನೀಡಿದ ಸಂದೇಶವನ್ನು ತಿಳಿಯಪಡಿಸುವುದು, ಇದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಧರ್ಮದ ತಿರುಳು ಒಂದೇ ಎಂಬುದನ್ನು ತಿಳಿಯಪಡಿಸುವುದು ಮೂಲ ಉದ್ದೇಶವೆಂದರು.
ದಳದ ವತಿಯಿಂದ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಮುಕ್ತ ಬಾಲಕೃಷ್ಣ ವೇಷ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಪ್ರಥಮ ಸ್ಥಾನವನ್ನು ಕೃತಿಕಾ, ದ್ವಿತೀಯ ಕೀರ್ತನ್, ತೃತೀಯ ಸೃಜನ್, ಚತುರ್ಥ ತೇಜಸ್, ಐದನೇ ಸ್ಥಾನವನ್ನು ರಿಫ, ಆರನೇ ಸ್ಥಾನವನ್ನು ಮನ್ವಿತಾ ಪಡೆದುಕೊಂಡರು. ಇವರಿಗೂ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪ್ರಹ್ಲಾದ ರೈ, ಸಂಚಾಲಕರಾದ ಜಯರಾಮ ಆಳ್ವ, ರಾಧಕೃಷ್ಣ ಶೆಟ್ಟಿ, ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಹಮೀದ್, ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜನಾರ್ಧನ್ ಉಪಸ್ಥಿತರಿದ್ದರು. ಪಟಾಲಂ ನಾಯಕಿ ಶ್ರಾವ್ಯ ನಿರೂಪಿಸಿದರು. ಪ್ರತೀಕ್ಷ ಸ್ವಾಗತಿಸಿದರು. ತಸ್ಪಿಯಾ ವಂದಿಸಿದರು.