ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರಕಾರ 25 ಕೋಟಿ ರೂ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಜನರಿಗೆ ಸಮರ್ಪಕವಾಗಿ ಉಪಯೋಗವಾಗುವ ರೀತಿಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ರಾಜ್ಯ ಸರಕಾರ ಬಿಡುಗಡೆಗೊಳಿಸಿರುವ ವಿಶೇಷ ಅನುದಾನ ಭಾಗದ ಜನರಿಗೆ ಉಪಯೋಗವಾಗಬೇಕು. ವಿಶೇಷವಾಗಿ ನೀರಿನ ಅಭಾವವಿರುವ ಪ್ರದೇಶ ಹಾಗೂ ರಸ್ತೆ ಸಮಸ್ಯೆ ಯನ್ನು ಮನಗಂಡು ಯಾವ ಭಾಗದಲ್ಲಿ ಈ ಸಮಸ್ಯೆಯೇ ಹೆಚ್ಚಿದೇ ಎಂದು ಪರಿಶೀಲನೆ ನಡೆಸಿ ಮೊದಲಿಗೆ ಆ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಈಗಾಗಲೇ ಉಳ್ಳಾಲ ಭಾಗದ ಚೆಂಬುಗುಡ್ಡೆ, ಕಾಪಿಕಾಡು, ಕಲ್ಲಾಪು, ಸೇವಂತಿಗುಡ್ಡೆ ಉಳ್ಳಾಲಬೈಲು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ಥಳೀಯ ಪ್ರತಿನಿಧಿಗಳು ಹಾಗೂ ಜನರ ಸಹಕಾರದಂದಿಗೆ ಮುಂದಿನ ದಿನಗಳಲ್ಲಿ ಉಳ್ಳಾಲವನ್ನು ಮಾದರಿ ನಗರವನ್ನಾಗಿ ಪರಿವರ್ತನೆ ನಡೆಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಹುಸೈನ್ ಕುಂಞ ಮೋನು, ಸದಸ್ಯರಾದ ಬಾಝಿಲ್ ಡಿಸೋಜ, ಭಾರತಿ , ಮುಸ್ತಾಫ, ಹಾಗೂ ಸ್ಥಳೀಯರಾದ ರವಿ, ರಿಚರ್ಡ್, ಸೋಮಯ್ಯ ಮತ್ತಿತರರು ಉಪಸ್ಥಿತರಿದ್ದರು.