Site icon Ullalavani

ಕಾವ್ಯಾ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ: ನಿತಿನ್ ಕುತ್ತಾರ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕುತ್ತಾರು: ಮೂಡಬಿದಿರೆಯಲ್ಲಿ ಅನುಮಾನಾಸ್ಪದ ಸಾವಿಗೀಡಾಗಿರುವ ಕಾವ್ಯಾಳ ಪ್ರಕರಣ ನಡೆದು ಹಲವು ದಿನಗಳಾದರೂ ಪೋಷಕರ ಅನುಮಾನಗಳಿಗೆ ಉತ್ತರವೂ ಸಿಕ್ಕಿಲ್ಲ, ತನಿಖೆ ಕೂಡ ನಡೆದಿಲ್ಲ, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿದೆ ಎಂದು ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಹೇಳಿದ್ದಾರೆ.

ಅವರು ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಅಸಹಜ ಸಾವು ಪ್ರಕರಣ ಸೂಕ್ತ ತನಿಖೆಗೆ ಒತ್ತಾಯಿಸಿ ಎಸ್ ಎಫ್ ಐ ಹಾಗೂ ಡಿ ವೈ ಎಫ್ ಐ ವತಿಯಿಂದ ಕುತ್ತಾರು ಜಂಕ್ಷನ್ನಿನಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾವ್ಯಾ ಆತ್ಮಹತ್ಯೆಗೈದ ನಂತರ ಪೊಲೀಸರು ಹಾಗೂ ಹೆತ್ತವರು ಸ್ಥಳಕ್ಕೆ ಬರುವ ಮುನ್ನವೇ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಇಲ್ಲಿ ಕಾವ್ಯಾ ಆತ್ಮಹತ್ಯೆ ನಡೆಸಲು ಉಪಯೋಗಿಸಿದ ಸೀರೆ ಹಾಸ್ಟೆಲ್ಲಿನಲ್ಲಿ ಎಲ್ಲಿಂದ ಬಂದಿದೆ ಮತ್ತು ಕಾವ್ಯ ದಿನನಿತ್ಯ ಬರೆಯುತ್ತಿದ್ದ ಡೈರಿ ಕೂಡಾ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ನಡೆದು ಹಲವು ದಿನಗಳಾದರೂ ಪೊಲೀಸರು ಮಾತ್ರ ತನಿಖೆಯನ್ನು ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾರೆ. ಎಸ್ ಎಫ್ ಐ ಆಳ್ವಾಸ್ ಶಿಕ್ಷಣ ಸಂಸ್ಥೆ ಪಡೆಯುತ್ತಿದ್ದ ಅಧಿಕ ಡೊನೇಷನ್ ವಿರುದ್ಧ ಹೋರಾಟ ನಡೆಸಿ ಜಯಗಳಿಸಿತ್ತು. ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುವ ಸಂದರ್ಭದಲ್ಲೂ ಹೋರಾಟ ನಡೆಸಿತ್ತು.

ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಆತ್ಮಹತ್ಯೆ ನಡೆಸಿದ ವಿದ್ಯಾರ್ಥಿನಿ ಕ್ರೀಡೆಗೆ ಅರ್ಹಳಲ್ಲ ಅನ್ನುವ ಹೇಳಿಕೆ ನೀಡುತ್ತಾರೆ. ಆದರೆ ಮುಖ್ಯಸ್ಥರು ಶಿಕ್ಷಣ ಕೊಡಲು ಅರ್ಹರಲ್ಲ ಎಂದು ಎಸ್ ಎಫ್ ಐ ಹೇಳುತ್ತದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ನೀತಿಗಳ ಪಾಲನೆಯಾಗುತ್ತಿಲ್ಲ. ಸರಕಾರಿ ಶಿಕ್ಷಕರನ್ನು ತರಬೇತಿಗೆ ಉಪಯೋಗಿಸಲಾಗುತ್ತಿದೆ. ಇದರ ವಿರುದ್ಧ ತನಿಖೆಯಾಗಬೇಕಿದೆ. ಜಿಲ್ಲೆಯವಳಾದ ಕಾವ್ಯಾ ಪ್ರಕರಣದ ವಿರುದ್ಧ ಜನ ದನಿ ಎತ್ತಿದ್ದಾರೆ. ಆದರೆ ಈ ಹಿಂದೆ ಹೊರಜಿಲ್ಲೆಯ ಹಲವು ವಿದ್ಯಾರ್ಥಿನಿಯರು ಆತ್ಮಹತ್ಯೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕೇಳಿದರೂ ಈವರೆಗೂ ಸಮಗ್ರ ಉತ್ತರ ಸಿಕ್ಕಿಲ್ಲ. ಇದರಿಂದ ಪೊಲೀಸರು ಆಳ್ವಾಸ್ ಸಂಸ್ಥೆಯ ಅಡಿಯಾಳುಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಖಚಿತ ಎಂದರು.

ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ ಹೆತ್ತವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶ್ರಮಪಟ್ಟು ದುಡಿಯುತ್ತಾರೆ. ಅಂತಹ ಹೆತ್ತವರಿಗೆ ಇದೀಗ ಮಗಳನ್ನು ಕಳೆದುಕೊಳ್ಳುವ ಮೂಲಕ ಅನ್ಯಾಯವಾಗಿದೆ. ಸಾವಿನ ನಂತರದ ಹಲವು ಬೆಳವಣಿಗೆಗಳು ಹಲವು ಸಂಶಯಗಳಿಗೆ ಕಾರಣವಾಗಿದೆ. ಅನುಮಾನಗಳಿಗೆ ಉತ್ತರ ಸಿಗಬೇಕಿದೆ. ನಿರ್ಭೀತಿಯ ಶಿಕ್ಷಣ ಸಿಗುವ ವಾತಾವರಣ ಶಿಕ್ಷಣ ಸಂಸ್ಥೆಗಳಿಂದ ಆಗಬೇಕಿದೆ ಎಂದರು

ಈ ಸಂದರ್ಭ ಡಿವೈಎಫ್‍ಐ ಮುಖಂಡ ಜೀವನರಾಜ್ ಕುತ್ತಾರ್ ಡಿ ವೈ ಎಫ್ ಐ ಉಳ್ಳಾಲ ವಲಯ ಜತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಡಿವೈ ಎಫ್ ಐ ಮುನ್ನೂರು ಗ್ರಾಮದ ಅಧ್ಯಕ್ಷ ಸುನಿಲ್ ತೇವುಲ, ಮಿಥುನ್ ಕುತ್ತಾರ್, ಎಸ್ ಎಫ್ ಐ ಬಟ್ಟೆದಡಿ ಘಟಕದ ಕಾರ್ಯದರ್ಶಿ ಚಶ್ಮಿತಾ ಗಾಣದಮನೆ, ದೀಕ್ಷಿತ್ ತೇವುಲ, ಶ್ರವಣ್ ತೇವುಲ, ಸುರೇಶ್ ಪೂಜಾರಿ, ಅಭಿಷೇಕ್ ಗಾಣದಮನೆ, ವಿವೇಕ್ ಕುತ್ತಾರ್, ಸಂದೇಶ್ ಶೆಟ್ಟಿ, ಮುನ್ನೂರು ಡಿವೈ ಎಫ್ ಐ ಮುಖಂಡರುಗಳಾದ ಭರತರಾಜ್, ಯೋಗೀಶ್, ದಿವ್ಯರಾಜ್, ದಿವ್ಸಾನ್ ತೇವುಲ, ಸಂಕೇತ್, ಎಸ್ ಎಫ್ ಐ ಮುಖಂಡರುಗಳಾದ ನಿಶಾ, ಗುರುದತ್ ಮೊದಲಾದವರು ಉಪಸ್ಥಿತರಿದ್ದರು.

Exit mobile version