ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ನಗರದ ವಿದ್ಯಾರ್ಥಿನಿಯರೆಂದರೆ ಉಡುಗೆ ತೊಡುಗೆಗೆ ಹೆಚ್ಚಿನ ಗಮನ ಕೊಡುವವರು, ಚಪ್ಪಲಿಯಿಂದ ಹಿಡಿದು ಕೊಡೆಯವರೆಗೆ ಒಂದೇ ಬಣ್ಣದ ಮ್ಯಾಚಿಂಗ್ ಉಡುಗೆಯನ್ನು ತೊಟ್ಟು ಹೋಗುವವರು, ತಿನ್ನುವ ಅನ್ನ ಯಾವ ರೀತಿಯಲ್ಲಿ ಆಗುತ್ತದೋ ಎಂದು ಪ್ರಶ್ನೆ ಮುಂದಿಟ್ಟರೂ ಹೇಳಲು ಸಾಧ್ಯವಾಗದ ವಿದ್ಯಾರ್ಥಿನಿಯರೇ ಹೆಚ್ಚು, ಆದರೆ ಇದನ್ನು ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯರು ಅಲ್ಲಗಳೆದಿದ್ದಾರೆ.
ಸಮುದಾಯದತ್ತ ಆಗ್ನೇಸ್ ಎಂಬ ಕಾರ್ಯಕ್ರಮದಡಿ ವಿದ್ಯಾರ್ಥಿನಿಯರು ಪ್ರತಿ ಶನಿವಾರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶನಿವಾರ ದಿನ 15 ವಿದ್ಯಾರ್ಥಿನಿಯರಲ್ಲಿ 40 ರಂತೆ ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿದೆಡೆ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡರು. ಹಲವರು ರಸ್ತೆಬದಿ ಬೆಳೆದ ಗಿಡಗಂಟೆಗಳನ್ನು ಕತ್ತರಿಸಿದರೆ, ಒಂದು ತಂಡ ಮುನ್ನೂರುವಿನಲ್ಲಿ ಜು.18 ರಂದು ನಡೆಯಲಿರುವ ಗ್ರಾಮಸಭೆಯ ಕರೆಯೋಲೆಯನ್ನು ಗ್ರಾಮಸ್ಥರಿಗೆ ಮುಟ್ಟಿಸಿದರು. ಈ ಪೈಕಿ ಒಂದು ತಂಡ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಹತ್ತು ಕಳಸದಷ್ಟು ಅಕ್ಕಿ ಸಿಗುವ ಗದ್ದೆಯ ಅರ್ಧದಷ್ಟು ಗದ್ದೆಯಲ್ಲಿ ನಾಟಿ ನೆಡುವ ಕೆಲಸದಲ್ಲಿ ತೊಡಗಿಕೊಂಡಿತು. ಬೆಳಿಗ್ಗೆ 11 ಗಂಟೆಯಿಂದ ಕೆಲಸ ಆರಂಭಿಸಿದ ವಿದ್ಯಾರ್ಥಿನಿಯರು ಸಂಜೆ 4 ರವರೆಗೆ ಶ್ರಮವಹಿಸಿ , ಹಿರಿಯಜ್ಜಿಯೋರ್ವರ ಮಾರ್ಗದರ್ಶನದಂತೆ ನೇಜಿ ನೆಟ್ಟರು.
ಇವರ ಜತೆಗೆ ಅಂಬ್ಲಮೊಗರು ಪಂಚಾಯಿತಿ ಸದಸ್ಯ ರಾಜೇಶ್ ಆಚಾರ್ಯ, ಅವರ ಪತ್ನಿ , ತಾಯಿ ಹಾಗೂ ಮಕ್ಕಳಿಬ್ಬರು ವಿದ್ಯಾರ್ಥಿನಿಯರ ಜತೆಗೆ ಸೇರಿಕೊಂಡು ಗದ್ದೆ ಕೆಲಸದಲ್ಲಿ ತೊಡಗಿಕೊಂಡರು. ಮಳೆಯನ್ನೂ ಲೆಕ್ಕಿಸದೆ ವಿದ್ಯಾರ್ಥಿನಿಯರು ಗ್ರಾಮದ ಜನರ ಜತೆಗೆ ಸೇರಿಕೊಂಡು ತೊಡಗಿಸಿಕೊಂಡ ಕೃಷಿ ಕೆಲಸ ಸಮುದಾಯದತ್ತ ವಿಷಯಕ್ಕೆ ಬಹಳಷ್ಟು ಪೂರಕವಾಗಿ ಕಂಡುಬಂದಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ನೇತೃತ್ವ : ಸಾಮಾಜಿಕ ಕಾರ್ಯಕರ್ತೆ ಹಾಗೂ ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲ್ಷ್ಮೀ ಗಟ್ಟಿ ಇವರ ನೇತೃತ್ವದಲ್ಲಿ ಕಳೆದ ಮೂರು ವಾರದ ಪ್ರತಿ ಶನಿವಾರ ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಅಲ್ಲದೆ ಅಂಬ್ಲಮೊಗರು ವ್ಯಾಪ್ತಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಮತ್ತು ಅವರಿಗೆ ಸಂಬಳ ಸಾಧ್ಯವಾಗದೆ ಹಲವು ಗದ್ದೆಗಳು ಹಡಿಲು ಬಿದ್ದಿವೆ. ಇದನ್ನು ವಿದ್ಯಾರ್ಥಿಗಳಿಗೆ ಅರಿವು ಜತೆಗೆ ಕೃಷಿಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅದಕ್ಕಾಗಿ ಗದ್ದೆಗಳನ್ನು ಗುರುತಿಸಿ ವಿದ್ಯಾರ್ಥಿನಿಯರ ಕೈಯಿಂದಲೇ ಕೃಷಿ ಕಾರ್ಯ ನಡೆಸಿ ಸಮಗ್ರ ಕೃಷಿ ಪಾಠ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಜಿ.ಪಂ ಸದಸ್ಯೆ ಹೇಳುತ್ತಾರೆ.
ಕಳೆದ ಎರಡು ವರ್ಷಗಳಿಂದ ಅಂತಿಮ ವರ್ಷದ ವಿದ್ಯಾರ್ಥಿನಿಯರು ಸಮುದಾಯದತ್ತ ವಿಷಯದಡಿ ಪ್ರತಿ ಶನಿವಾರ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದೇವೆ. ಗದ್ದೆಯಲ್ಲಿ ಇಳಿದು ಕೆಲಸ ಮಾಡಿರುವುದು ವಿಶಿಷ್ಟ ಅನುಭವವಾಗಿತ್ತು. ಎಲ್ಲಿ ನಮ್ಮಿಂದ ಆಗುತ್ತದೋ ಅನ್ನುವ ಸಂಶಯವಿತ್ತು. ಆದರೆ ಶ್ರಮವಹಿಸಿ, ಎಲ್ಲ 40 ಮಂದಿ ವಿದ್ಯಾರ್ಥಿನಿಯರು ಮನಸ್ಸು ಕೊಟ್ಟು ದುಡಿದಿದ್ದಾರೆ. ಸ್ಥಳೀಯರ ಪ್ರೋತ್ಸಾಹವೂ ಉತ್ತಮವಾಗಿದ್ದ ಕಾರಣ ಉತ್ತಮವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಪಾಠದ ಜತೆಗೆ ಇಂತಹ ಚಟುವಟಿಕೆಗಳು ಬೇಕು ಅನಿಸುತಿತ್ತು. ಇಂದು ಅದನ್ನು ಪೂರೈಸುವ ಮೂಲಕ ಮನಸ್ಸಿಗೆ ಹಾಗೂ ಜೀವಕ್ಕೆ ವ್ಯಾಯಾಮ ಸಿಕ್ಕಂತಾಗಿದೆ. ಮುಂದೆಯೂ ಇಂತಹ ಕಾರ್ಯಗಳಿದ್ದಲ್ಲಿ ಹುರುಪಿನೊಂದಿಗೆ ಭಾಗವಹಿಸುವೆವು.
ಸ್ವಾತಿ
ಅಂತಿಮ ವರ್ಷದ ವಿದ್ಯಾರ್ಥಿನಿ