Site icon Ullalavani

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲಾ ಸಭಾ ಭವನದಲ್ಲಿ ಭಾನುವಾರ ನಡೆಯಿತು.

ಸಂಸ್ಥೆಯ ಅಧ್ಯಕ್ಷ  ಎಂ.ಜಿ.ಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೆರ್ಮನ್ನೂರು ಚರ್ಚ್‍ನ ಧರ್ಮಗುರುಗಳಾದ ವಂದನೀಯ ರೆ| ಫಾ| ಜೆ.ಬಿ.ಸಲ್ದಾನ ಭಾಗವಹಿಸಿ  ಮಕ್ಕಳು ಸ್ಕೌಟ್ ಗೈಡ್ ಶಿಕ್ಷಣ ಪಡೆಯುವುದರ ಜತೆಗೆ  ಸದ್ಭಾವನೆ, ಸಚ್ಚಾರಿತ್ರ್ಯ ಸರ್ವಧರ್ಮ ಸಹಿಷ್ಣುತೆ ಮೊದಲಾದ ಸದ್ಗುಣಗಳನ್ನು ಪಡೆದು ಹೆತ್ತವರಿಗೆ, ಶಾಲೆಗೆ, ಊರಿಗೆ ಆ ಮೂಲಕ ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದರು.

ಜಿಲ್ಲಾ ಸ್ಕೌಟ್ಸ್  ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ಮಾತನಾಡಿ ಸ್ಕೌಟ್ಸ್ ಗೈಡ್ಸ್ ಗಳು ಕಲಿಕೆಯ ಜತೆಗೆ ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಸ್ವಚ್ಚತಾ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಪಾಲಿನ ಕರ್ತವ್ಯವನ್ನು ಮಾಡಬೇಕು ಎಂದ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲೆ ಮತ್ತು ರಾಜ್ಯದ ಹಲವಾರು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಜಿಲ್ಲಾ ಆಯುಕ್ತ  ರಾಮಶೇಷ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳಾರ್, ಸಹ ಜಿಲ್ಲಾ ಆಯುಕ್ತ ಎಂ.ಹೆಚ್ ಮಲಾರ್, ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಎಂ.ಕೆ.ಮಂಜನಾಡಿ, ಅಹಮ್ಮದ್ ಅಬ್ಬಾಸ್, ಸೆಬಾಸ್ಟಿಯನ್ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ನತಾಲಿಯ  ಜಿಲ್ಲಾ ಸ್ಕೌಟ್ಸ್ ಸಂಘಟಕ ಭರತ್ ರಾಜ್  ಅವರು ಉಪಸ್ಥಿತರಿದ್ದರು.

ಸಭೆಯಲ್ಲಿ 2017-18 ರ ಸಾಲಿನ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಯ್ತು.  ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ವಲಯ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮತ್ತು ವಲಯ ಸ್ಕೌಟ್ಸ್ ಸಮನ್ವಯಾಧಿಕಾರಿ ಗುರುನಾಥ ಬಾಗೆವಾಡಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಗಂಗಾಬಾಯಿ ಅವರನ್ನು ಸನ್ಮಾನಿಸಲಾಯಿತು. 2016-17 ನೇ ಸಾಲಿನಲ್ಲಿ ತೃತೀಯ ಸೋಪಾನ, ರಾಜ್ಯ ಪುರಸ್ಕಾರ, ರಾಷ್ಟ್ರಪತಿ ಪುರಸ್ಕಾರ ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು ಪುರಸ್ಕರಿಸಲಾಯ್ತು. ಕಳೆದ ಸಾಲಿನಲ್ಲಿ ನಮ್ಮ ಸಂಸ್ಥೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ವಿವಿಧ ಶಾಲೆಗಳನ್ನು ಅಭಿನಂದಿಸಲಾಯಿತು.

ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಮಝೀದ್ ಸಂಸ್ಥೆಯು 2016-17 ನೇ ಸಾಲಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿ ವಾಚಿಸಿದರು. ಕೋಶಾಧಿಕಾರಿ ಜಗದೀಶ್ ಶೆಟ್ಟಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಸೆಬಾಸ್ತಿಯನ್ ಶಾಲೆಯ ಸ್ಕೌಟ್ಸ್ ಶಿಕ್ಷಕ ಪ್ರವೀಣ್ ವಂದಿಸಿದರು. ಹರೇಕಳ ಶಾಲೆಯ ಸ್ಕೌಟ್ಸ್ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರ್ವಹಿಸಿದರು.

Exit mobile version