ಉಳ್ಳಾಲ ನ್ಯೂಸ್ ನೆಟ್ವರ್ಕ್
ದೇರಳಕಟ್ಟೆ: ವೈದ್ಯಕೀಯ ವೃತ್ತಿಯಲ್ಲಿ ಹಣ ಗಳಿಸುವುದಕ್ಕೆ ಮುಖ್ಯವಲ್ಲ. ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸುವುದರಿಂದ ರೋಗಿಗಳು ಶಾಶ್ವತವಾಗಿ ಆ ವೈದ್ಯರನ್ನು ನಂಬುತ್ತಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸೇವೆ ಆತ್ಮತೃಪ್ತಿ ಕೊಡುವಂತೆ ಇರಬೇಕು ಎಂದು ನಿಟ್ಟೆ ವಿಶ್ವ್ವವಿದ್ಯಾಲಯದ ಸಹ ಕುಲಾ„ಪತಿ ಡಾ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಭಾರತ ರತ್ನ ಡಾ. ಬಿ.ಸಿ.ರಾಯ್ ಜನ್ಮ ದಿನಾಚರಣೆ `ಡಾಕ್ಟರ್ಸ್ ಡೇ’ ಪ್ರಯುಕ್ತ ಪ್ರತಿ ವರ್ಷ ಜು. 1ರಂದು ಕ್ಷೇಮದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಮೂರು ಖ್ಯಾತ ವೈದ್ಯರನ್ನು ಸನ್ಮಾನಿಸಲಾಗುತ್ತಿದ್ದು ಅದರಂತೆ ಖ್ಯಾತ ವೈದ್ಯರಾದ ಡಾ. ಎಂ.ಪಿ. ಶೆಟ್ಟಿ ಸಿದ್ಧಾಪುರ, ಬಿ. ವಸಂತ ಬಾಳಿಗಾ ಬಂಟ್ವಾಳ, ಡಾ. ಹರಿದಾಸ್ ವೆರ್ ಕೋಟ್ ನೀಲೇಶ್ವರ ಅವರನ್ನು ಕ್ಷೇಮ ಸೆಮಿನಾರ್ ಹಾಲ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರ ಹಾಗೂ ರೋಗಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ರೋಗಿಗಳಿಗೆ ನೀಡುತ್ತಿರುವ ಪ್ರಾಮಾಣಿಕ ಸೇವೆಯಿಂದಾಗಿ ರೋಗಿಗಳಿಂದ ಉತ್ತಮವಾದ ಗೌರವು ಸಿಗುತ್ತದೆ.ಅಂತಹ ಗೌರವಕ್ಕೆ ಪಾತ್ರವಾಗಿರುವ ಇಂದಿಗೂ ಅದೆಷ್ಟೋ ಸಾವಿರ ಸಾವಿರ ಸಂಖ್ಯೆಯ ರೋಗಿಗಳ ಪಾಲಿಗೆ ವೈದ್ಯರು ದೇವರ ಸ್ಥಾನದಲ್ಲಿದ್ದು ಇಂದು ಸನ್ಮಾನಿಸಲ್ಪಟ್ಟ ವೈದ್ಯರುಗಳು ಆಯಾ ಕ್ಷೇತ್ರದಲ್ಲಿ ಆಯಾ ಭಾಗದಲ್ಲಿ ಬಹಳ ಜನಪ್ರಿಯರು. ಅವರಿಂದ ಇನ್ನಷ್ಟು ಸೇವೆ ಲಭ್ಯವಾಗಲಿ ಎಂದು ಆಶಿಸಿದರು.
ಕ್ಷೇಮ ಡೀನ್ ಪ್ರೋ. ಡಾ. ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಡಾ. ಸಿದ್ಧಾರ್ಥ್ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಪಿ. ಶೆಟ್ಟಿ ಅವರನ್ನು ಡಾ. ವಿಕ್ರಮ್ ಶೆಟ್ಟಿ , ಡಾ. ಹರಿದಾಸ್ ಅವರನ್ನು ಡಾ. ರಾಜೀವ್ ಹಾಗೂ ಡಾ. ಬಿ. ವಸಂತ ಬಾಳಿಗಾ ಅವರನ್ನು ಡಾ. ತನ್ಮಯ ಭಟ್ ಪರಿಚಯಿಸಿದರು. ಬಳಿಕ ಸನ್ಮಾನಿತ ವೈದ್ಯರು ತಮ್ಮ ವೃತ್ತಿ ಬದುಕಿನ ಅನಿಸಿಕೆ ವ್ಯಕ್ತಪಡಿಸಿದರು. ಕ್ಷೇಮ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹಿರೇಮಠ ವಂದಿಸಿದರು.