ಉಳ್ಳಾಲ ನ್ಯೂಸ್ ನೆಟ್ವರ್ಕ್
ಮಂಗಳೂರು: “ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿಧ್ಯಾರ್ಥಿಗಳ ಕಲಿಕೆಯ ಒತ್ತಡ ನಿರ್ವಹಣೆಯಲ್ಲಿ ಚಿತ್ರಕಲೆ ಪ್ರಧಾನ ಪಾತ್ರವಹಿಸುತ್ತದೆ. ಚಿತ್ರಕಲಾ ಶಿಕ್ಷಣವು ವಿಧ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಹಾಗೂ ಚಿತ್ರಕಲಾ ಶಿಕ್ಷಕರು ಪಾಠ ಪ್ರವಚನಗಳಿಗೆ ಸೀಮಿತವಾಗದೆ ಶಿಕ್ಷಣ ಸಂಸ್ಥೆಗಳ, ಶಿಕ್ಷಣ ಸಂಬಂಧಿ ಕಛೇರಿಗಳ ಸೌಂಧರೀಕರಣದ ಜಾಗೃತಿಯಲ್ಲೂ ತೊಡಗಿಸಿಕೊಂಡಿದ್ದಾರೆ.”ಎಂದು ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಆಯೋಜಿಸಿದ ಕಾರ್ಯಾಗಾರವನ್ನು ಉದ್ಘಾಟಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಂಗ ಉಪ ನಿರ್ದೇಶಕರಾದ ವಾಲ್ಟರ್ ಎಚ್.ಡಿ ಮೆಲ್ಲೋ ಮಾತನಾಡಿದರು.
ಪ್ರಾಸ್ತಾವಿಕವಾಗಿ ಸಂಘದ ಜಿಲ್ಲಾಧ್ಯಕ್ಷರಾದ ಮಹಾಬಲ ಕುಳ ಮಾತನಾಡಿ “ಜಿಲ್ಲಾ ಸಂಘವು ನಿಂತ ನೀರಾಗದೆ-ಸದಾ ಹೊಸ ಯೋಜನೆ-ಯೋಚನೆಗಳೊಂದಿಗೆ ಸಾಗುತ್ತಾ ಇದೆ. ಜಿಲ್ಲೆಯ ಎಲ್ಲಾ ಚಿತ್ರಕಲಾ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವ ಜೊತೆಗೆ ನವೀನ ಪ್ರಯೋಗಗಳಿಗೆ ಪ್ರೇರಣೆ ನೀಡಿ ಗುರುತಿಸುವುದು ಸಂಘದ ಜವಾಬ್ದಾರಿಯಾಗಿದೆ.”ಎಂದರು.
ಅತಿಥಿಗಳಾಗಿ ಆಗಮಿಸಿದ ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುಳಾ, “ಶಿಕ್ಷಣದ ವ್ಯವ್ಯಸ್ಥೆಯೊಳಗೆ ಪಾರಂಪರಿಕ ವಿಧಾನಗಳನ್ನು ಬದಿಗಿಟ್ಟು ಬೆಳವಣಿಗೆಗೆ ಪೂರಕವಾದ ಪ್ರಕ್ರಿಯೆಗೆ ತೊಡಗಿಕೊಳ್ಳುವ ಮುಖೇನ ಚಿತ್ರಕಲಾ ಶಿಕ್ಷಕರು ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ.”ಎಂದರು. ಈ ಸಂಧರ್ಭದಲ್ಲಿ ಪ್ರತಿಭಾನ್ವಿತ ಸಾಧಕ ಶಿಕ್ಷಕರಾದ ಮನೋರಂಜಿನಿ ರಾವ್, ಶಾಲಿನಿ, ವೆಂಕಿ ಪಲಿಮಾರು, ತಾರನಾಥ ಕೈರಂಗಳ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಮತ್ತು ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ತಾಲೂಕುವಾರು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ,ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ ಕೆನರಾ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಪಿ.ಗೋಪಾಲಕೃಷ್ಣ ಶೆಣೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷೀಯ ನೆಲೆಯಲ್ಲಿ ಕೆನರಾ ಫ್ರೌಡಶಾಲೆಯ ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ.ಸಿ. ಚಿತ್ರಕಲಾ ಶಿಕ್ಷಕ ಸಂಘದ ಧ್ಯೇಯೋಧ್ದೇಶಗಳನ್ನು ಕೊಂಡಾಡಿ ಚಟುವಟಿಕೆಗಳು ನಿರಂತರವಾಗಿರಲೆಂದು ಕಿವಿ ಮಾತು ಹೇಳಿದರು. “ಚಿತ್ರಕಲಾ ಶಿಕ್ಷಣದಲ್ಲಿ ಗ್ರೇಡ್ ಪರೀಕ್ಷೆ”ಕುರಿತಾದ ಕಾರ್ಯಗಾರವನ್ನು ಪೆರ್ಮುದೆ ಮೋಹನ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿ ಕೊಟ್ಟರು. ಸಂಘದ ಕಾರ್ಯದರ್ಶಿಯಾದ ದಿನೇಶ್ ಶೆಟ್ಟಿಗಾರ್ ಸ್ವಾಗತಿಸಿ,ಕುಮಾರಿ ಅಂಬಿಕಾ ವಂದಿಸಿದರು. ತಾರನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.