ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಕಡಲ್ಕೊರೆತದಿಂದ ನಿರಂತರ ತೊಂದರೆಗೊಳಗಾಗುತ್ತಿರುವವರಿಗೆ ಸರಕಾರಿ ಜಮೀನಿನಲ್ಲಿ ವಸತಿ ಸಂಕೀರ್ಣ ಅಥವಾ ಮನೆ ನಿರ್ಮಿಸಿ ಕೊಡುವ ಯೋಜನೆ ಇದ್ದು, ಸದ್ಯ ತಾತ್ಕಾಲಿಕವಾಗಿ ಜೀವನ ನಿರ್ವಹಿಸಲು ಸ್ಥಳೀಯಾಡಳಿತದಿಂದ 4-5 ತಿಂಗಳವರೆಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮಂಗಳೂರಿನ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಹೇಳಿದ್ದಾರೆ.
ಸಮುದ್ರ ತೀರದಲ್ಲಿ ವಾಸಿಸುತ್ತಿರುವವರು ಮೀನುಗಾರಿಕೆಯನ್ನು ನಂಬಿ ಜೀವನ ನಿರ್ವಹಣೆ ನಡೆಸುತ್ತಿರುವವರು. ಅವರನ್ನು ದೂರದ ಊರಿಗೆ ವರ್ಗಾಯಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಸರ್ಕಾರಿ ಜಮೀನು ಇದ್ದಲ್ಲಿ ಅದರಲ್ಲಿ ವಸತಿ ಸಂಕೀರ್ಣ ಇಲ್ಲವೇ, ಮನೆ ನಿರ್ಮಿಸಿ ಕೊಡುವ ಯೋಜನೆ ಇದೆ. ಅದುವರೆಗೆ ತಾತ್ಕಾಲಿಕ ರಕ್ಷಣೆ ನಿಟ್ಟಿನಲ್ಲಿ ಮನೆ ತೊರೆಯಲು ಮನಸ್ಸು ಇದ್ದವರು ನಗರಸಭೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ನೀಡಿದರೆ ನಾಲ್ಕೈದು ತಿಂಗಳ ಮಟ್ಟಿಗೆ ವ್ಯವಸ್ಥೆ ಮಾಡಲಾಗುವುದು. ಮನೆಗೆ ಮರಳುವ ವೇಳೆ ಹಾನಿಯಾಗಿದ್ದರೆ ಅದನ್ನೂ ದುರಸ್ತಿಪಡಿಸಲಾಗುವುದು ಎಂದ ಅವರು ಶಾಶ್ವತ ಪರಿಹಾರ ಎನ್ನುವುದು ದೀರ್ಘ ಯೋಜೆನೆಯಾಗಿದ್ದು, ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಸ್ಥಳಕ್ಕೆ ಬಂದಿದ್ದೇನೆ ಎಂದರು.
ಎರಡು ದಿನಗಳಲ್ಲಿ ಸ್ಥಳಕ್ಕೆ ಇಂಜಿನಿಯರ್ ಗಳು : ಸ್ಥಳದ ಕುರಿತು ಇಂಜಿನಿಯರ್ಗಳೇ ಯೋಜನೆ ರೂಪಿಸಬೇಕಿದೆ, ಈ ನಿಟ್ಟಿನಲ್ಲಿ ಎನ್ಎಂಪಿಟಿ, ಎಡಿಬಿ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳನ್ನು ಒಂದೆರೆಡು ದಿನಗಳಲ್ಲಿ ಸ್ಥಳಕ್ಕೆ ಕರೆಸಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಉಚ್ಚಿಲ ಪ್ರದೇಶದ ಕಡೆಗಣನೆ : ಉಳ್ಳಾಲ ಮತ್ತು ಉಚ್ಚಿಲ ಭಾಗದಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ಕಲ್ಲು ಹಾಕಲಾಗಿ ತಾತ್ಕಾಲಿಕ ತಡೆಯನ್ನು ಮಾಡಲಾಗಿದೆ ಅನ್ನುವುದು ಸರಕಾರದಿಂದ ಕೇಳಿಬಂದಿದೆ. ಆದರೆ ಅಷ್ಟೂ ಮೊತ್ತವನ್ನು ಉಪಯೋಗಿಸಿಕೊಂಡು ಮನೆ ಕಳೆದುಕೊಂಡವರಿಗೆ ಶಾಶ್ವತ ಮನೆಯನ್ನು ನಿರ್ಮಿಸಬಹುದಿತ್ತು. ಅಲ್ಲದೆ ಉಚ್ಚಿಲ ಭಾಗದಲ್ಲಿ ಬಹಳಷ್ಟು ಸಮುದ್ರದಿಂದ ಹಾನಿಯಾಗಿದ್ದರೂ, ಉಳ್ಳಾಲಕ್ಕೆ ನೀಡಿರುವ ಸವಲತ್ತುಗಳನ್ನು ಉಚ್ಚಿಲದವರಿಗೆ ನೀಡಿಲ್ಲ. ಸಂಪೂರ್ಣ ಮನೆ ಹೋದರೂ 60 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರ ದೂರಿದರು.
ಈ ವೇಳೆ ತಾಲೂಕು ಪಂಚಾಯಿತಿ ಸದಸ್ಯ ರವಿಶಂಕರ್, ಕಂದಾಯ ನಿರೀಕ್ಷಕ ಸ್ಟೀಫನ್, ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ, ಸೋಮೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೀಶ್ ಉಚ್ಚಿಲ, ವೇದಾವತಿ, ಸಚಿನ್ ಉಚ್ಚಿಲ, ಇಸ್ಮಾಯೀಲ್ ನಾಗತೋಟ, ಅಜಿತ್ ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.