ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬಾರ್ಜ್ ದುರಂತ ನಡೆದು ಒಂಭತ್ತು ದಿನಗಳಾಗುತ್ತಾ ಬಂದಿದೆ. ಬಿರುಸಿನ ಅಲೆಗಳ ನಡುವೆ ಸಿಲುಕಿರುವ ಬಾರ್ಜ್ ಸಂಪೂರ್ಣ ಸಮುದ್ರಪಾಲಾಗಲು ಕ್ಷಣಗಣನೆಯನ್ನು ಎಣಿಸುತ್ತಿದ್ದು, ಸ್ಥಳೀಯರು ತೇಲಿಬಂದ ಸೊತ್ತುಗಳ ಶೋಧ ದಲ್ಲಿ ನಿರತರಾಗಿದ್ದಾರೆ.
ಜೂ. 3 ರಂದು ಕಡಲ್ಕೊರೆತ ಕಾಮಗಾರಿ ನಿರತ ಬಾಜ್ ್ ಅಲೆಗಳ ಅಬ್ಬರಕ್ಕೆ ರೀಫ್ ಮೇಲೆ ಹಾಕಲಾಗಿದ್ದ ಕಲ್ಲುಗಳಿಗೆ ಸಿಲುಕಿ ಹಾನಿಗೀಡಾಗಿತ್ತು. ಈ ಸಂದರ್ಭ ಅಪಾಯದಲ್ಲಿ ಸಿಲುಕಿದ್ದ 27 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಆದರೆ ಸಮುದ್ರದ ಅಲೆಗಳ ರಭಸಕ್ಕೆ ಬಾರ್ಜ್ ಮೇಲೆತ್ತಲು ಅಸಾಧ್ಯವಾಗಿತ್ತು. ಸೋಮವಾರ ಬಾರ್ಜ್ ನಿಂದ ತೇಲಿಬಂದ ರೆಫ್ರಿಜರೇಟರ್ ಸೀಗ್ರೌಂಡ್ ಸಮುದ್ರ ತೀರವನ್ನು ತಲುಪಿದೆ. ಸ್ಥಳೀಯರು ಅದನ್ನು ಮುರಿದು ಅದರೊಳಗೆ ಸೊತ್ತುಗಳಿರುವ ಬಗ್ಗೆ ಶೋಧ ನಡೆಸಿದರು.
ಅಪಾಯದಲ್ಲಿ ರೀಫ್: ಬಾರ್ಜ್ ಶೇ.90 ರಷ್ಟು ಮುಳುಗಿದೆ. ಇದರಿಂದಾಗಿ ಕಡಲ್ಕೊರೆತ ತಡೆಗಾಗಿ ಹಾಕಲಾದ ಶಾಶ್ವತ ತಡೆಗೋಡೆಯ ರೀಫ್ ಗಳು ಅಪಾಯದಂಚಿನಲ್ಲಿವೆ. ಸದ್ಯ ಬಾರ್ಜ್ ಮೇಲಿರುವ ಕ್ರೇನ್ ಮಾತ್ರ ಸಮುದ್ರದ ಮೇಲೆ ಗೋಚರಿಸುತ್ತಿದ್ದು, ಸಂಪೂರ್ಣವಾಗಿ ಮುಳುಗಿದಲ್ಲಿ ರೀಫ್ ಸಾಲಿನಲ್ಲೂ ಬಿರುಕುಂಟಾಗಿ ತಡೆಗೋಡೆಯೂ ಸಮುದ್ರಪಾಲಾಗುವುದರಲ್ಲಿ ಸಂಶಯವಿಲ್ಲ ಅನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ