Site icon Ullalavani

ಉಳ್ಳಾಲದಲ್ಲಿ ಸಮುದ್ರಪಾಲಾದ ಮನೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ಉಳ್ಳಾಲ ಕೈಕೋ ಪ್ರದೇಶದಲ್ಲಿ ಸಮುದ್ರ ಪ್ರಕ್ಷುಬ್ದ ಗೊಂಡಿದ್ದು, ಅಲೆಗಳ ರಭಸಕ್ಕೆ ಮನೆಯೊಂದು ಸಂಪೂರ್ಣ ಸಮುದ್ರ ಪಾಲಾಗಿದ್ದು ಉಳಿದಂತೆ 10ಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಮಂಗಳವಾರ ಮುಂಜಾನೆ ಕಡಲ್ಕೊರೆತೆ ತಾತ್ಕಾಲಿಕ ಪರಿಹಾರಕ್ಕಾಗಿ ಕಲ್ಲುಗಳನ್ನು ಹಾಕಿದ ಪರಿಣಾಮವಾಗಿ ಮನೆ ಭಾಗಶಃ ಸಮುದ್ರ ಪಾಲಾಗಿದ್ದು, ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ.

ಉಳ್ಳಾಲದ ಕೈಕೋ ನಿವಾಸಿ ಖೈರುನ್ನೀಸಾ ಎಂಬವರ ಮನೆ ಭಾಗಶಃ ಸಮುದ್ರ ಪಾಲಾಗಿದ್ದು, ಮನೆಯೊಳಗಿದ್ದ ಸೊತ್ತುಗಳನ್ನು ಸ್ಥಳೀಯರು ಸೇರಿಕೊಂಡು ಬೇರೆ ಮನೆಗಳಿಗೆ ಸ್ಥಳಾಂತರಿಸಿದ್ದಾರೆ. ಎರಡು ವಾರಗಳಿಂದ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು. ಆದರೂ ಜಿಲ್ಲಾಡಳಿತ ಕೈಕೋ ಪ್ರದೇಶದ ಖಯರುನ್ನೀಸಾ ಅವರ ಮನೆ ಹಿಂಬದಿಯಲ್ಲಿ ಕಲ್ಲು ಹಾಕುವ ಮನಸ್ಸು ಮಾಡಿರಲಿಲ್ಲ. ಮಂಗಳವಾರ ಬೆಳಗ್ಗಿನಿಂದ ಕಲ್ಲುಗಳನ್ನು ಹಾಕುವ ಪ್ರಯತ್ನ ನಡೆಯಿತ್ತಾದರೂ ಮಧ್ಯಾಹ್ನದ ವೇಳೆಗೆ ಖೈರುನ್ನೀಸಾ ಅವರ ಕಣ್ಣೆದುರಲ್ಲೇ ಮನೆ ಕಡಲಿನ ಅಲೆಗಳ ಪಾಲಾಯಿತು.

ಉದ್ಯಮಿ ರಾಜಕಾರಣಿಯ ಬಂಗಲೆ ರಕ್ಷಣೆ:
ಉದ್ಯಮಿ ಹಾಗೂ ಜೆಡಿಎಸ್ ಮುಖಂಡರೋರ್ವರು ಇತ್ತೀಚೆಗಷ್ಟೇ ಖರೀದಿಸಿದ ಬಂಗಲೆಯನ್ನು ಕಡಲ್ಕೊರೆತದಿಂದ ರಕ್ಷಿಸುವ ಸಲುವಾಗಿ ಶಾಶ್ವತ ತಡೆಗೋಡೆ ಕಾಮಗಾರಿಯನ್ನು ನಡೆಸಲಾಗಿದೆ. ಈ ಪರಿಣಾಮವಾಗಿ ಬಡವರ್ಗದ ಜನರ ಮನೆಗಳಿರುವ ಕೈಕೋ ಹಿಲೇರಿಯಾನಗರ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಒಮ್ಮಿಂದೊಮ್ಮೆಲೆ ಶಾಶ್ವತ ತಡೆಗೋಡೆ ಕಾಮಗಾರಿಯನ್ನು ಉಳ್ಳಾಲದಿಂದ ತಲಪಾಡಿಯವರೆಗೆ ನಡೆಸುತ್ತಿದ್ದಲ್ಲಿ ಮನೆಗಳು ಸಮುದ್ರ ಪಾಲಾಗುವ ಹಂತಕ್ಕೆ ತಲುಪುತ್ತಿರಲಿಲ್ಲ ಅನ್ನುವ ಆರೋಪ ಸ್ಥಳೀಯ ನಾಸಿರ್ ಎಂಬವರದ್ದಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಕಡಲ್ಕೊರೆತೆ ತೀವ್ರಗೊಂಡ ಸ್ಥಳಕ್ಕೆ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು, ಸದಸ್ಯರಾದ ಮಹಮ್ಮದ್ ಮುಕ್ಕಚೇರಿ, ಮಹಾಲಕ್ಷ್ಮೀ, ನಗರಸಭೆ ಪೌರಾಯುಕ್ತೆ ವಾಣಿ ಆಳ್ವ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಪಾಯದಲ್ಲಿ ಸಿಲುಕಿರುವ ಮನೆ ಮಂದಿಯನ್ನು ಬೇರೆ ಕಡೆಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು.

ಬಾರ್ಜ್ ದುರಂತದಲ್ಲಿ ಸ್ಪಂಧಿಸಿದ ಸಚಿವರು ಸ್ಥಳೀಯರಿಗೆ ಸ್ಪಂಧಿಸಿಲ್ಲ :
ಬಾರ್ಜ್ ದುರಂತದ ವೇಳೆ ನಸುಕಿನ ಜಾವವೇ ಸಚಿವರು ಮೈಸೂರಿನಿಂದ ಆಗಮಿಸಿ ಬಾರ್ಜ್ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂಧಿಸಿದರೆ ಕ್ಷೇತ್ರದ ಜನರ ಮನೆ ಹೋದರೂ ಸ್ಪಂಧನೆಗೆ ಬರಲಿಲ್ಲ. ವಾರದಿಂದ ಸಮುದ್ರದ ಅಲೆಗಳ ಅಬ್ಬರ ವಿಪರೀತವಾಗಿದ್ದರೂ ಸ್ಥಳೀಯಾಡಳಿತಕ್ಕೆ ದೂರನ್ನು ನೀಡುತ್ತಾ ಬಂದಿದ್ದೇವೆ, ಆದರೂ ಸ್ಥಳಕ್ಕೆ ಸಚಿವರು ಒಮ್ಮೆ ಭೇಟಿ ಮಾಡಿ ತುರ್ತಾಗಿ ಅಧಿಕಾರಿಗಳ ಸಭೆ ಕರೆಯುವ ಭರವಸೆಯನ್ನು ನೀಡಿ ತೆರಳಿದ್ದರೂ ಆದರೂ ಈವರೆಗೂ ಸಭೆ ನಡೆದಿಲ್ಲ. ಭಾರ್ಜ್ ದುರಂತದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳೊಂದಿಗೆ ಖೈರುನ್ನೀಸಾ ಅವರ ಮನೆ ಹಿಂಬದಿಗೆ ಶೀಘ್ರವೇ ಕಲ್ಲುಗಳನ್ನು ಹಾಕಿ ಮನೆಯನ್ನು ಉಳಿಸಿ ಕೊಡುವಂತೆ ಕೇಳಿಕೊಂಡಿದ್ದೇವು ಆದರೆ ಮಂಗಳವಾರ ಮುಂಜಾನೆಯಿಂದ ಕಲ್ಲುಗಳನ್ನು ಹಾಕಿದ ಪರಿಣಾಮವಾಗಿ ಮನೆ ಭಾಗಶಃ ಸಮುದ್ರ ಪಾಲಾಯಿತು. ಶೀಘ್ರವೇ ಜಿಲ್ಲಾಡಳಿತ ಸ್ಪಂದಿಸಿ ಮನೆಮಂದಿಗೆ ಪುರ್ನವಸತಿ ಕಲ್ಪಿಸಬೇಕು

-ಯು.ಟಿ ಖಲೀಲ್
ಸ್ಥಳೀಯರು

ಹೆಚ್ಚಿನ ಪರಿಹಾರ ಒದಗಿಸುವಂತೆ ತಹಸಿಲ್ದಾರರಿಗೆ ಪತ್ರ:
ಉಳ್ಳಾಲ ಕೈಕೋ ಮತ್ತು ಹಿಲೆರಿಯಾ ನಗರದಲ್ಲಿ 10 ರಿಂದ 15 ಮನೆಗಳು ಅಪಾಯದಂಚಿನಲ್ಲಿದೆ ನಗರಸಭೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ಸಮುದ್ರ ಪಾಲಾದ ಮನೆಯ ಮಹಿಳೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸ್ಥಳಾಂತರಿಸಲಾಗಿದೆ. ತಹಸಿಲ್ದಾರರಿಗೆ ಪತ್ರ ಬರೆದು ಹೆಚ್ಚಿನ ಪರಿಹಾರ ಸಿಗುವಂತೆ ಪ್ರಯತ್ನಿಸಲಾಗುವುದು
ವಾಣಿ ಆಳ್ವ
ಉಳ್ಳಾಲ ನಗರಸಭೆ ಪೌರಾಯುಕ್ತೆ

Exit mobile version