Site icon Ullalavani

ಹೆಲಿಕಾಪ್ಟರ್ ಮೂಲಕವಾದರೂ ರಕ್ಷಿಸಿ: ರಕ್ಷಣೆಗಾಗಿ ಮೊರೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಬಾರ್ಜಿನೊಳಗಡೆ ನೀರು ನುಗ್ಗುತ್ತಿದೆ. ದೇಶದಲ್ಲಿ ತಾಂತ್ರಿಕತೆ ಇಷ್ಟೊಂದು ಮುಂದುವರಿದರೂ ನಮ್ಮಲ್ಲಿಗೆ ಯಾರೂ ಬರುವ ಪ್ರಯತ್ನ ಮಾಡುತ್ತಿಲ್ಲ ಸರ್. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದೇವೆ. ಹೆಲಿಕಾಪ್ಟರ್ ಮೂಲಕ ತಕ್ಷಣ ಕಾರ್ಯಾಚರಿಸಿ ರಕ್ಷಿಸಿ, ಇಲ್ಲವಾದರೆ 23 ಮಂದಿಯೂ ಸಾಯಬೇಕಾದೀತು. ಇಷ್ಟರವರೆಗೆ 5 ಮಂದಿಯನ್ನು ಮಾತ್ರ ರಕ್ಷಿಸಿದ್ದಾರೆ ‘ ಇದು ಬಾರ್ಜ್ ಒಳಗಡೆ ಸಿಲುಕಿರುವ ಶೋಭಿತ್ ರಾತ್ರಿ 8.46ರ ಹೊತ್ತಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ರಕ್ಷಣೆಗೆ ಮೊರೆ ಹೋದ ರೀತಿಯಿದು.


`ಏಳು ದಿನಗಳಾದರೂ ಕರೆದೊಯ್ಯಲು ಕಂಪೆನಿಯವರು ಬಂದಿಲ್ಲ ‘

ರೀಫ್ ಕಾಮಗಾರಿ ಮುಗಿದು ಏಳು ದಿನಗಳಾಗಿದೆ. ನಾಲ್ಕು ದಿನಗಳ ಹಿಂದೆ ಸಮುದ್ರದ ಅಬ್ಬರಕ್ಕೆ ಬಾರ್ಜಿಗೆ ಕಟ್ಟಲಾಗಿದ್ದ ಎರಡು ಆಂಕರ್‍ಗಳು ತುಂಡಾಗಿತ್ತು. ಕಂಪೆನಿಯವರಿಗೆ ಮಾಹಿತಿ ನೀಡಿದ್ದರೂ ಸ್ಪಂಧಿಸಿರಲಿಲ್ಲ. ಶನಿವಾರ ಮಧ್ಯಾಹ್ನ ವೇಳೆಗೆ ಮೂರನೇ ಆಂಕರ್ ಕೂಡಾ ತುಂಡಾಗಿ ಒಂದು ಕಡೆ ಬಾರ್ಜ್ ಮುಳುಗಲು ಆರಂಭವಾಗಿದೆ. ಮಧ್ಯಾಹ್ನ ವೇಳೆ ಕಂಪೆನಿಯವರಿಗೆ ಮಾಹಿತಿ ನೀಡಿದ್ದರೂ ಸ್ಪಂಧಿಸಿರಲಿಲ್ಲ. ಸಂಜೆ 6 ಗಂಟೆ ವೇಳೆಗೆ ಕರಾವಳಿ ರಕ್ಷಣಾ ಪಡೆಯ ಹಡಗು ಬಂದಿದೆ. ಅವರಿಗೂ ಸಮುದ್ರದ ಅಬ್ಬರದಿಂದ ರೀಫ್ ಕಡೆಗೆ ಬರಲು ಸಾಧ್ಯವಾಗದೆ, ದೂರದಲ್ಲೇ ನಿಲ್ಲಿಸಿ ಒಂದು ಲೈಫ್ ಕ್ರಾಫ್ಟ್ ಬಾಜ್ ್ ಇರುವ ಪ್ರದೇಶಕ್ಕೆ ರಕ್ಷಣೆಗೆ ಬಂದಿದೆ. ಆದರೆ ಹಡಗಿನತ್ತ ಲೈಫ್ ಕ್ರಾಫ್ಟ್ ಬಂದು 24 ಮಂದಿಯನ್ನು ಲೈಫ್ ಕ್ರಾಫ್ಟ್ ಗೆ ಇಳಿಸುವ ಸಂದರ್ಭ ಲೈಫ್ ಕ್ರಾಫ್ಟ್ ಬಾರ್ಜ್‍ಗೆ ತಗಲಿ ತೂತಾಗಿದೆ. ಈ ವೇಳೆ ನಾಲ್ಕು ಜನರನ್ನಾದರೂ ಹಡಗಿಗೆ ಸುರಕ್ಷಿತವಾಗಿ ಕೊಂಡೊಯ್ಯಿರಿ ಎಂದು ಉಳಿದ ಕಾರ್ಮಿಕರು ಬಾಜ್ ್ನಲ್ಲೇ ಉಳಿದುಕೊಂಡರು. ಆದರೆ ಸಮುದ್ರದ ಅಬ್ಬರಕ್ಕೆ ಸದ್ಯ ರಕ್ಷಣಾ ಕಾರ್ಯಾಚರಣೆಯೂ ಸ್ಥಗಿತಗೊಂಡಿದೆ. ಘಟನೆಗೆ ಮುಂಬೈ ಮೂಲದ ಐಬಿಐಎಸ್‍ನಡಿ ಕಾರ್ಯಾಚರಿಸುತ್ತಿರುವ ಧರ್ತಿ ಕಂಪೆನಿಯೇ ನೇರ ಹೊಣೆಯಾಗಿದೆ ಅನ್ನುವ ಆರೋಪ ಬಾರ್ಜ್ ಒಳಗಡೆ ಇರುವವರಿಂದ ಕೇಳಿಬಂದಿದೆ. ಸ್ಥಳೀಯ ಮಂಗಳೂರಿನ ಶೋಭಿತ್ ಓರ್ವರೇ ಹೊರರಾಜ್ಯದವರಾದ ಪಂಜಾಬ್, ಉತ್ತರಪ್ರದೇಶ, ಹಿಮಾಚಲಪ್ರದೇಶ, ಮೂಲದ ಕಾರ್ಮಿಕರಿಗೆ ಧೈರ್ಯ ತುಂಬುತ್ತಿದ್ದಾರೆ.

ನಸುಕಿನ ಜಾವ ಹೆಲಿಕಾಪ್ಟರ್

ಸಮುದ್ರದ ಅಲೆಗಳ ಅಬ್ಬರಕ್ಕೆ ದೋಣಿ ಮೂಲಕ ರಕ್ಷಣಾ ಕಾರ್ಯಾಚರಣೆ ಕಷ್ಟವಾಗಿದೆ. ಅದಕ್ಕಾಗಿ ಬಾಜ್ ್ ಒಳಗಡೆ ಇರುವ ಎಲ್ಲಾ ಕಾರ್ಮಿಕರಿಗೆ ರಿಂಗ್ ಹಾಗೂ ಲೈಫ್ ಜಾಕೆಟ್ ಬಳಸಲು ಸೂಚಿಸಲಾಗಿದೆ. ಕರಾವಳಿ ರಕ್ಷಣಾ ಪಡೆಯ ಹೆಲಿಕಾಪ್ಟರ್ ನಸುಕಿನ 4 ಗಂಟೆ ವೇಳೆ ಸ್ಥಳಕ್ಕೆ ಬರಲಿದ್ದು, ಬಳಿಕ ಎಲ್ಲಾ ಕಾರ್ಮಿಕರ ರಕ್ಷಣೆ ನಡೆಯಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Exit mobile version