Site icon Ullalavani

ಕಿಲೇರಿಯಾನಗರ: ಮನೆಗಳಿಗೆ ಅಪ್ಪಳಿಸಿದ ಅಲೆಗಳು

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಉಳ್ಳಾಲ ಸಮುದ್ರತೀರದ ಪ್ರದೇಶದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕಿಲೇರಿಯನಗರ , ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಮನೆ ಹಾಗೂ ಮಸೀದಿಗಳಿಗೆ ಅಲೆಗಳು ಬುಧವಾರ ಮಧ್ಯಾಹ್ನದಿಂದ ಅಪ್ಪಳಿಸಲು ಆರಂಭವಾಗಿದ್ದು, ಜನ ಭೀತಿಯನ್ನು ಎದುರಿಸುತ್ತಿದ್ದಾರೆ.

ಕಿಲೇರಿಯನಗರದಲ್ಲಿರುವ 10ಕ್ಕೂ ಅಧಿಕ ಮನೆಗಳು, ಮಸೀದಿಗಳಿಗೆ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಮಳೆ ಆರಂಭವಾಗದೆ ಸಮುದ್ರದ ಅಲೆಗಳ ರಭಸ ಹೆಚ್ಚಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಬ್ರೇಕ್ ವಾಟರ್ ನಿಂದ ತೊಂದರೆ: ಕೋಟೆಪುರ, ಮೊಗವೀರಪಟ್ನ ಭಾಗದಲ್ಲಿ ಶಾಶ್ವತ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳು ಕಿಲೇರಿಯನಗರ, ಸುಭಾಷನಗರ, ಉಚ್ಚಿಲ , ಸೋಮೇಶ್ವರ ಭಾಗದಲ್ಲಿ ಅಪ್ಪಳಿಸಲು ಆರಂಭವಾಗಿದೆ. ಏಕಕಾಲದಲ್ಲಿ ಉಳ್ಳಾಲದಿಂದ ತಲಪಾಡಿ ಭಾಗದವರೆಗೂ ಸುರಕ್ಷಾ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸುತ್ತಿದ್ದಲ್ಲಿ ಇಂತಹ ತೊಂದರೆ ಮರುಕಳಿಸುತ್ತಿರಲಿಲ್ಲ ಅನ್ನುವುದು ಸ್ಥಳೀಯರ ಆರೋಪವಾಗಿದೆ.

ಸಚಿವರು ಮತ್ತೆ ಭೇಟಿ ನೀಡಲಿ: ಕೆಲ ದಿನಗಳ ಹಿಂದೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿದ್ದರು. ಈ ವೇಳೆ ಮೂರು ದಿನಗಳಲ್ಲಿ ಅಧಿಕಾರಿಗಳನ್ನು ಭೇಟಿ ನೀಡಿ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು. ಆದರೆ ಈವರೆಗೆ ಸ್ಥಳೀಯ ನಗರಸಭೆ ಅಧಿಕೃತರಾಗಲಿ, ಜಿಲ್ಲೆಯ ಅಧಿಕಾರಿಗಳಾಗಲಿ ಭೇಟಿ ನೀಡಿಲ್ಲ. ಅದಕ್ಕಾಗಿ ಮತ್ತೆ ಸಚಿವರು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ತಿಂಡಿ ಮಾಡುವ ಸ್ಥಿತಿಯಿಲ್ಲ:
ಬ್ರೇಕ್ ವಾಟರ್ ಸರಿಯಾಗದೆ ಯಾವುದೂ ಸಾಧ್ಯವಿಲ್ಲದಂತಾಗಿದೆ. ಉಪವಾಸದ ಸಂದರ್ಭ ಮನೆಯಲ್ಲಿ ತಿಂಡಿ ಮಾಡುವ ಸ್ಥಿತಿಯಲ್ಲಿ ಮನೆಮಂದಿಯಿಲ್ಲ. ಯಾವತ್ತು ಮನೆ ಮತ್ತು ಮಸೀದಿ ಸಮುದ್ರಪಾಲಾಗುವುದೋ ಅನ್ನುವ ಭೀತಿಯಲ್ಲಿದ್ದೇವೆ. ಕಳೆದ ವರ್ಷವೂ ಪರಿಹಾರದ ಭರವಸೆ ಮಾಧ್ಯಮಗಳಲ್ಲಿ ಮಾತ್ರ ಕಂಡಿದ್ದೇವೆ. ಆದರೆ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಸಚಿವರು, ಸಂಬಂದಿಸಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಕ್ರಮಕೈಗೊಳ್ಳಬೇಕಿದೆ.

ಖಲೀಲ್
ಅಧ್ಯಕ್ಷರು
ಬದ್ರಿಯ ಜುಮಾ ಮಸೀದಿ ಕಿಲೇರಿಯಾನಗರ
ಸ್ಥಳೀಯರನ್ನು ಎಬ್ಬಿಸಿದಲ್ಲಿ ಅವರು ಹೋಗಲು ಸ್ಥಳವಿಲ್ಲದಂತಾಗಿದೆ. ಕೂಡಲೇ ಇಲ್ಲಿನ ಬಡಜನರಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ. ತೀರಾ ಕಷ್ಟಕರವಾಗಿ ಬಾಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ಕೂಡಲೇ ಸ್ಪಂಧಿಸಬೇಕು.

ಜೈನುಲಾಬುದ್ದೀನ್
ಖತೀಬರು
ಬದ್ರಿಯ ಜುಮಾ ಮಸೀದಿ ಕಿಲೇರಿಯಾನಗರ

Exit mobile version