Site icon Ullalavani

ಹರೇಕಳ ಟು ಅಡ್ಯಾರ್ ಸೇತುವೆ : ಸಚಿವ ಖಾದರ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಹರೇಕಳ: ಕೊಣಾಜೆ, ಮುಡಿಪು ಪ್ರದೇಶ ಅಭಿವೃದ್ಧಿಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರಿಗೂ ಸಹಕಾರಿಯಾಗುವಂತೆ ಹರೇಕಳದಿಂದ ಅಡ್ಯಾರು ಕಡೆಗೆ ಸೇತುವೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಸದ್ಯ ಸರ್ವೇ ಕಾರ್ಯ ನಡೆಯುತ್ತಿದೆ. ಅಲ್ಲದೆ ಸೇತುವೆಯ ಕೊನೆಯ ಎಂಬ್ಯಾಕ್‍ಮೆಂಟ್ ಸ್ಥಳದ ಕೊರತೆಯಿರುವುದರಿಂದ ಅದನ್ನು ತಿಳಿಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಸೇತುವೆ ನಿರ್ಮಾಣವಾದಲ್ಲಿ ಹರೇಕಳ, ಕೊಣಾಜೆ, ಮುಡಿಪು ನಿವಾಸಿಗಳಿಗೆ ಪಟ್ಟಣ ಪ್ರದೇಶ ಬಹಳ ಹತ್ತಿರವಾಗಲಿದ್ದು, ಪ್ರದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

 

ಅವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಂಗಳೂರು ಕರಾವಳಿ ಅಲ್ಪ ಸಂಖ್ಯಾತಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಉತ್ತರ ಧಕ್ಕೆ , ಬಂದರು ಇದರ ವತಿಯಿಂದ ಮಂಗಳೂರು ತಾಲೂಕು ಹರೇಕಳ ಗ್ರಾಮದ ರಾಜಗುಡ್ಡೆ, ನ್ಯೂಪಡ್ಪು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಗಳ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ರಾಜಗುಡ್ಡೆ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ವಿತರಣಾ ಸಮಾರಂಭದಲ್ಲಿ ಪುಸ್ತಕ ಮತ್ತು ಕಂಪ್ಯೂಟರ್ ವಿತರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳನ್ನು ಗುರುತಿಸಿ ಶೈಕ್ಷಣಿಕವಾಗಿ ಸಬಲರಾಗಲು ಪ್ರೋತ್ಸಾಹಿಸುತ್ತಿರುವ ಸಹಕಾರಿ ಸಂಘದ ಕಾರ್ಯ ಮಹತ್ತರವಾದದ್ದು , ಇಂತಹ ಸಮಾಜಿಕ ಕಾರ್ಯಗಳಲ್ಲಿ ಎಲ್ಲಾ ಸಂಘಟನೆಗಳು ನಡೆಸಬೇಕಿದೆ . ವ್ಯಾಪಾರದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಬಹಳ ವಿರಳ. ಆದರೆ ಇದನ್ನು ಕರಾವಳಿ ಅಲ್ಪ ಸಂಖ್ಯಾತಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಡೆಸಿ ತೋರಿಸಿಕೊಳ್ಳುವ ಮೂಲಕ ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ. ಇಂತಹ ಮಾನವೀಯತೆಯ ಗುಣ ಎಲ್ಲರಲ್ಲೂ ಬೆಳೆಯಬೇಕಿದೆ. ಗ್ರಾಮೀಣ ಭಾಗ ಹರೇಕಳದಲ್ಲೂ ಪಿಯುಸಿ ಕಾಲೇಜು ತೆರೆಯಬೇಕಾಗಿದ್ದು, ಇದಕ್ಕೆ ಬೇಕಾದ ಸಹಕಾರವನ್ನು ನೀಡಲು ಸಿದ್ಧ ಎಂದ ಅವರು ಶಿಕ್ಷಣಕ್ಕೆ ಸಹಕಾರಿಯಾಗುವ ಮೂಲಕ ಮಕ್ಕಳ ಬಾಳು ಪ್ರಕಾಶಿಸುವಂತೆ ಮಾಡುವುದು ಸಮಾಜದ ಅಭಿವೃದ್ಧಿಯ ಸಂದೇಶವಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಕರಾವಳಿ ಅಲ್ಪ ಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ
ಜೆ. ಮಹಮ್ಮದ್ ಇಸಾಕ್ ವಹಿಸಿದ್ದರು. ಮಂಗಳೂರಿನ ಶೆಟ್ಟಿ ಎಂಡ್ ಥಾಮಸ್ ಕಂಪೆನಿಯ ಚಾರ್ಟೆಡ್ ಅಕೌಂಟ್ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸಂಸ್ಥೆಗೆ ಸಲ್ಲಿಸಿದ ಸೇವೆಗಾಗಿ ಸನ್ಮಾನಿಸಲಾಯಿತು.

ಕೊಣಾಜೆ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಭಾನು, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಡಿ.ಸೋಜ, ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಹ್ಲಾದ ರೈ ಮುದಲೆಮಾರ್, ಮೀನುಗಾರಿಕಾ ಇಲಾಖೆ ಮಂಗಳೂರಿನ ಸಹಾಯಕ ನಿರ್ದೇಶಕ ಮಹೇಶ್ವರನ್, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಸಂಚಾಲಕ ಜಯರಾಮ ಆಳ್ವ ಪೋಡಾರ್, ಸರಕಾರಿ ಪ್ರೌಢಶಾಲೆ ನ್ಯೂಪಡ್ಪು ಹರೇಕಳದ ಕಾರ್ಯಾಧ್ಯಕ್ಷ ಹಾಜಬ್ಬ ಹರೇಕಳ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ, ಸರಕಾರಿ ಪ್ರೌಢಶಾಲೆ ನ್ಯೂಪಡ್ಪು ಹರೇಕಳದ ಮುಖ್ಯ ಶಿಕ್ಷಕಿ ಶಶಿ ವಿ., ದ.ಕ.ಜಿ.ಪ.ಹಿ. ಪ್ರಾಥಮಿಕ ಶಾಲೆ ರಾಜಗುಡ್ಡೆ ಇಲ್ಲಿನ ಅಧ್ಯಕ್ಷ ರಫೀಕ್ ರಾಜಗುಡ್ಡೆ, ಮುಖ್ಯ ಶಿಕ್ಷಕಿ ವಿನೋದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನ್ಯೂಪಡ್ಪು ಇದರ ಅಧ್ಯಕ್ಷೆ ಬೇಬಿ, ಮುಖ್ಯ ಶಿಕ್ಷಕಿ ಲಿಲ್ಲಿ ಡಿ.ಸೋಜ,ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹರೇಕಳದ ಮುಖ್ಯ ಶಿಕ್ಷಕ ಎಡ್ವಾರ್ಡ್ ನಥಾಯಲ್, ಉಪಾಧ್ಯಕ್ಷ ಅಹಮ್ಮದ್ ಬಾವ ಬಜಾಲ್, ಮುಖ್ಯ ಕಾರ್ಯ ನಿರ್ವಹಣಾ ಅ„ಕಾರಿ ಅಬ್ದುಲ್ ಲತೀಫ್, ನಿರ್ದೇಶಕರಾದ ಯು.ಟಿ.ಅಹಮ್ಮದ್ ಶರೀಫ್, ಎಂ.ಎ. ಗಫೂರ್, ಟಿ.ಎಚ್. ಹಮೀದ್, ಎಸ್.ಎಂ. ಇಬ್ರಾಹಿಂ, ಕೆ.ಎಂ.ಎಚ್. ಇಬ್ರಾಹಿಂ, ಮಹಮ್ಮದ್ ಅಶ್ರಫ್ , ಪಂಚಾಯತ್ ಸದಸ್ಯರಾದ ಅಬ್ದುಲ್ ಸತ್ತಾರ್, ಬದ್ರುದ್ಧೀನ್ ಉಪಸ್ಥಿತರಿದ್ದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಸ್ವಾಗತಿಸಿ ಪ್ರಸ್ತಾವನೆಗೈದರು. ಮುಖ್ಯ ಕಾರ್ಯ ನಿರ್ವಹಣಾ ಅ„ಕಾರಿ ಅಬ್ದುಲ್ ಲತೀಫ್ ವಂದಿಸಿದರು.

 

Exit mobile version