ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ವಿಶ್ವ ತಾಯಂದಿರ ದಿನದ ಅಂಗವಾಗಿ ರೋಟರಿ ಕ್ಲಬ್ ಮಂಗಳೂರು, ರೋಟರಿ ಸಮುದಾಯದಳ ಕುಂಪಲ, ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ , ಕೇಸರಿ ಮಾತೃಮಂಡಳಿಯ ವತಿಯಿಂದ ಸೋಮೇಶ್ವರ ಹಾಗೂ ಕೋಟೆಕಾರು ಗ್ರಾಮ ವ್ಯಾಪ್ತಿಯ 30 ಅಂಗನವಾಡಿ ಹಾಗೂ 2 ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಪುಟ್ಟಯಂತ್ರ ಅಳವಡಿಸಿದ ಬಕೆಟ್ಗಳನ್ನು ಕೇಸರಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕೇಸರಿ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ನಾರಾಯಣ ಕುಂಪಲ ಮಾತನಾಡಿ ಅಂಗನವಾಡಿಯ ಪುಟ್ಟ ಮಕ್ಕಳಿಗೆ ಮಾತೃ ಮಂಡಳಿಯೊಂದಿಗೆ ಸೇವೆ ಸಲ್ಲಿಸುವ ಕಾಯಕ ಶ್ರೇಷ್ಠ ಕಾರ್ಯ. ಮಕ್ಕಳಿಗೆ ಶುದ್ಧ ನೀರು ನೀಡುವುದು ತುಂಬಾ ಅವಶ್ಯಕವಾಗಿರುವುದರಿಂದ ಇದರ ಸದುಪಯೋಗವನ್ನು ಪಡೆದು ಆರೋಗ್ಯವಂತ ಪ್ರಜೆಗಳ ನಿರ್ಮಾಣವಾಗಲಿ ಎಂದು ವಿಶ್ವ ತಾಯಂದಿರ ದಿನದ ಅಂಗವಾಗಿ ಎಲ್ಲಾ ತಾಯಂದಿರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಸರಿ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಪ್ರಸಾದ್ ವಹಿಸಿ ಮಾತನಾಡಿ ಮಂಗಳೂರಿನ ರೋಟರಿ ಕ್ಲಬ್ ನ ಜೆ.ಟಿ. ಪೌಂಡೇಶನ್ ರವರ ಸಹಕಾರವನ್ನು ಸ್ಮರಿಸುತ್ತಾ ಅವರ ಕೊಡುಗೆಗಳನ್ನು ಸದುಪಯೋಗ ಪಡಿಸೋಣ, ಕುಡಿಯುವ ನೀರು ಶುದ್ಧವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇದರಿಂದ ಮಕ್ಕಳೂ ಆರೋಗ್ಯವಂತರಾಗುತ್ತಾರೆ. ತಾಯಿಯಂತೆ ಮಮಕಾರ ದಿಂದ ಅಂಗನವಾಡಿ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಂಗನವಾಡಿ ಶಿಕ್ಷಕಿಯರು ಹಾಗೂ ತಾಯಂದಿರಿಗೆ ಶುಭ ಹಾರೈಸಿದರು.
ಅಂಗನವಾಡಿಗಳ ಪರವಾಗಿ ರೇವತಿ ವಿಶ್ವನಾಥ್ ಹಾಗೂ ರಮಾದೇವಿ ಕೊಂಡಾಣ ವಂದಿಸಿದರು.
ಹೇಮಲತಾ ಯತೀಶ್ ಪ್ರಾರ್ಥನೆಗೈದರು. ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಕುಜುಮಗದ್ದೆ ವಂದಿಸಿದರು.