ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಸತ್ವಾಧಾರಿತ ಕೃತಿಗಳು, ಉನ್ನತ ಭಾಷೆಗಳ ರಚನೆಯ ಮೂಲಕ ಹಿಂದು ಧರ್ಮದ ವಿಚಾರಗಳನ್ನು ಎತ್ತಿಹಿಡಿದು, ಧರ್ಮಕ್ಕಾಗಿ ಜೀವನ ತ್ಯಾಗ ಮಾಡಿದ ಗುರು ಶಂಕರಾಚಾರ್ಯರ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಎಲ್ಲರು ಶ್ರಮಿಸಬೇಕಿದೆ ಎಂದು ಮಂಗಳೂರು ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ದೇವರಾಜ್ ಅಭಿಪ್ರಾಯಪಟ್ಟರು.
ಗುರುಗಳ ಪ್ರತಿಪಾದನೆ ಶೈಲಿ, ನಿಖರ ಉದ್ದೇಶಗಳು ಅವರ ಸಾಹಿತ್ಯದಲ್ಲಿತ್ತು. ಅವರ ಉದ್ದೇಶಗಳನ್ನು ಕಾರ್ಯಗತಗೊಳಿಸಲು ವೈವಿಧ್ಯತೆಯಲ್ಲಿ ಏಕತೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಸಾಮಾಜಿಕ ಕಳಕಳಿಗಳಾದ ನೊಂದವರ ಕಷ್ಟಗಳಿಗೆ ಸ್ಪಂಧನೆ, ವೃದ್ಧರಿಗೆ ಅನುಕೂಲವಾಗುವ ಸೇವೆಗಳು, ಉಚಿತ ವೈದ್ಯಕೀಯ ಸೇವೆಗಳ ಂತಹ ಕಾರ್ಯ ಉತ್ಸವದ ಮೂಲಕ ಆಗಬೇಕಿದೆ. ವೈವಿಧ್ಯತೆಯಲ್ಲಿ ಏಕತೆಯ ಪ್ರತಿಪಾದಕರಾಗಿದ್ದ ಶಂಕರಾಚಾರ್ಯರ ಉದ್ದೇಶಗಳನ್ನು ಪಾಲಿಸಲು ಎಲ್ಲರೂ ಜಾತಿ ಮತ ಬೇಧಗಳನ್ನು ದೂರವಿಟ್ಟು ಬಾಳಬೇಕಿದೆ. ಗೌರವ ಸಂಪ್ರದಾಯಗಳನ್ನು ಉಳಿಸುವ ಮೂಲಕ ಸಂಪ್ರದಾಯಗಳ ಪಾಲನೆಯಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾೈಕ್ ಮಾತನಾಡಿ ಅದ್ವೈತ ಪರಂಪರೆಯ ಅನುಯಾಯಿಗಳಾದ ಎಲ್ಲರೂ ಶ್ರೀ ಶಂಕರ ಜಯಂತಿ ಕಾರ್ಯಕ್ರಮವನ್ನು ಆಚರಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ. ಸುಂದರ ನಾೈಕ್ , ಸಾಲಿಗ್ರಾಮ ಕೂಟ ಮಹಾ ಜಗತ್ತು ಇದರ ಮಾಜಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್, ಮಂಗಳೂರು ಎಂ.ಸಿ.ಎಫ್ ನ ನಿರ್ದೇಶಕ ಕಾಂತಾವರ ಪ್ರಭಾಕರ್ ರಾವ್, ಕರಾಡ ಬ್ರಾಹ್ಮಣ ಸಭಾ ಸ್ಥಾಪಕ ಸದಸ್ಯ ಎಂ.ಪುರುಷೋತ್ತಮ ಭಟ್, ಎರ್ಮಾಳು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸ್ಥಾಪಕ ಮೊಕ್ತೇಸರ ವೆಂಕ ಶೆಟ್ಟಿಗಾರ್, ಪರಿವಾರ ಬಂಟ ಸಮಾಜದ ಅಧ್ಯಕ್ಷ ಮಹಾಬಲ ಶೆಟ್ಟಿ, ಕಟ್ಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನಂ ನ ಅಧ್ಯಕ್ಷ ಟಿ.ಸುಧಾಕರ ಆಚಾರ್ಯ, ಸಂಜೀವ ರಾವ್ ಸಿಂಧ್ಯ, ಕುಂದಾಪುರ ಖಾರ್ವಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ, ಉಳ್ಳಾಲ ಗಟ್ಟಿ ಸಮಾಜ ಸೇವಾ ಸಂಘದ ಕೃಷ್ಣ ಮೋಹನ್ ಗಟ್ಟಿ , ಶ್ರೀ ಶೃಂಗೇರಿ ಮಠದ ಕೇರಳ ರಾಜ್ಯದ ಪ್ರತಿನಿಧಿ ಪಿ.ಎನ್. ಗೋಪಾಲ ಕೃಷ್ಣನ್ , ಹೆಗ್ಗಡೆ ಸಮಾಜದ ಶ್ರೀ ಶಂಕರ, ಕುಮಾರ ಕ್ಷತ್ರಿಯದ ರಮೇಶ್.ಸಿ.ಹೆಚ್ ಮುಖ್ಯ ಅತಿಥಿಗಳಾಗಿದ್ದರು.
ಶ್ರೀ ಶಂಕರ ಸೇವಾ ಪ್ರತಿಷ್ಠಾನ ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಸ್ವಾಗತಿಸಿದರು. ಸಾಯಿನಾಥ್ ಮಲ್ಲಿಗೆಮಾಡು ಕಾರ್ಯಕ್ರಮ ನಿರ್ವಹಿಸಿದರು. ಶಿವಾಜಿ ಅಧಿಕಾರಿ ವಂದಿಸಿದರು.
ಈ ಸಂದರ್ಭ ಶ್ರೀ ಶಂಕರ ಸೇವಾ ಪ್ರತಿಷ್ಠಾನದ ಶ್ರೀ ಶೃಂಗೇರಿ ಶಂಕರ ಮಠದ ಬೊಳ್ಳಾವ ಸತ್ಯ ಶಂಕರ ಇವರನ್ನು ಸನ್ಮಾನಿಸಲಾಯಿತು.
ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀರ್ಶವರ ಜಗದ್ಗುರು ಶ್ರಿ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಕಾರ್ಯಸೂಚಿಯಲ್ಲಿ ನಮೂದಿಸಿದಂತೆ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶತರುದ್ರಯಾಗ, ಶ್ರೀ ಶಂಕರ ಅಷ್ಟೋತ್ತರ ಶತನಾಮಾವಳಿ ಪಾರಾಯಣ ಹಾಗೂ ಶ್ರೀ ಶಂಕರ ಸೋತ್ರಗಳ ಹಾಡುಗಾರಿಕೆ ನಡೆಯಿತು.