ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲದ ಸಮುದ್ರ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಕೈಕೋ ರಸ್ತೆ, ಕಿಲೇರಿಯ, ಉಚ್ಚಿಲ ಭಾಗದ ಮನೆಗಳಿಗೆ ಸಮುದ್ರದ ಅಲೆಗಳು ಏರಿಳಿತಿದ ಸಂದರ್ಭದಲ್ಲಿ ಅಪ್ಪಳಿಸಲು ಆರಂಭವಾಗಿದೆ.
ಮಳೆಗಾಲ ಆರಂಭವಾದರೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದರೆ, ಈ ಭಾರಿ ಮಳೆ ಆರಂಭವಾಗದೆ ಕೆಲ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಕೈಕೋ ಭಾಗದಲ್ಲಿ ನಾಲ್ಕು ಮನೆಗಳು, ಕಿಲೇರಿಯಾನಗರ ಮತ್ತು ಉಚ್ಚಿಲ ಭಾಗದಲ್ಲಿ ಮತ್ತೆ ನಾಲ್ಕು ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ಮಧ್ಯಾಹ್ನ ವೇಳೆ ಸಮುದ್ರದಲ್ಲಿ ಏರಿಳಿತ ಉಂಟಾಗುವ ಸಂದರ್ಭ ಅಲೆಗಳು ಅಬ್ಬರ ಹೆಚ್ಚುತ್ತಿವೆ.
ಭೀತಿಯ ವಾತಾವರಣ: ಮಳೆ ಆರಂಭವಾಗದೆ ಸಮುದ್ರ ಅಪ್ಪಳಿಸಲು ಆರಂಭವಾಗಿರುವುದರಿಂದ ಸ್ಥಳದಲ್ಲಿರುವ ಮನೆಮಂದಿಗೆ ಆತಂಕದ ವಾತಾವರಣ ಮನೆ ಮಾಡಿದೆ. ಇದರಿಂದ ರಾತ್ರಿ ಮತ್ತು ಮಧ್ಯಾಹ್ನದ ವೇಳೆ ಮನೆಯ ಗೋಡೆ ಯಾವಾಗ ಉರುಳಿ ಬೀಳುತ್ತವೆ ಅನ್ನುವ ಭೀತಿಯಲ್ಲಿದ್ದಾರೆ. ಕೂಡಲೇ ತಾತ್ಕಾಲಿಕ ತಡೆಯನ್ನು ಸರಕಾರ ಒದಗಿಸಬೇಕಿದೆ ಅನ್ನುವ ಆಗ್ರಹ ಸ್ಥಳೀಯರದ್ದಾಗಿದೆ.
ರೂ. 250 ಕೋಟಿ ಅನುದಾನದಲ್ಲಿ ಸಮುದ್ರಕ್ಕೆ ಶಾಶ್ವತ ತಡೆಗೋಡೆ ಕಾವiಗಾರಿ ಆರಂಭವಾಗಿದ್ದರೂ, ಉಚ್ಚಿಲ, ಸಿಗ್ರೌಂಡ್ , ಸೋಮೇಶ್ವರ ಸಮುದ್ರ ತೀರವನ್ನು ಕಡೆಗಣಿಸಲಾಗಿದೆ. ಇದರಿಂದ ಮೊಗವೀರಪಟ್ನ, ಕೋಡಿ ಪ್ರದೇಶದಲ್ಲಿ ಹಾಕಿರುವ ಕಲ್ಲುಗಳಿಂದ ಸಮುದ್ರ ಈ ಕಡೆಯಲ್ಲಿ ಅಪ್ಪಳಿಸುತ್ತಿವೆ ಅನ್ನುವುದು ಕೈಕೋ ನಿವಾಸಿಗಳ ಆರೋಪವಾಗಿದೆ.
250 ಮೀ ಅಂತರ ಸಿಆರ್ ಝೆಡ್ ವ್ಯಾಪ್ತಿಗೆ ಬರುವುದರಿಂದ ಹೊಸ ಮನೆಗಳ ನಿರ್ಮಾಣಕ್ಕೆ ನಗರಸಭೆ ಬಿಡುತ್ತಿಲ್ಲ. 40 ವರ್ಷಗಳಿಂದ ವಾಸಿಸುತ್ತಿದ್ದ ವ್ಯಕ್ತಿಯೋರ್ವರು ನೂತನ ಮನೆ ನಿರ್ಮಿಸಿದ್ದರೂ, ಡೋರ್ ನಂಬರ್ ನೀಡದೆ ನೂತನ ಮನೆಗೆ ವಿದ್ಯುತ್ ಕೂಡಾ ಸಿಕ್ಕಿಲ್ಲ. ಸಮೀಪದಲ್ಲೇ ಅದೇ ಪರಿಮಿತಿಯಲ್ಲಿ ಬೃಹತ್ ಗಾತ್ರದ ಕಟ್ಟಡಗಳಿಗೆ ಯಾವುದೇ ಕಾನೂನು ಇಲ್ಲದಂತಾಗಿದೆ. ಡೋರ್ ನಂಬರ್, ಸಿಆರ್ ಝೆಡ್ ವ್ಯಾಪ್ತಿ ಎಲ್ಲವನ್ನೂ ಉಲ್ಲಂಘಿಸಿ ಕಟ್ಟಡಗಳು ತಲೆ ಎತ್ತಿವೆ. ಇವುಗಳಿಗೆ ನಗರಸಭೆ ಆಡಳಿತ ನಿರಕ್ಷೇಪಣಾ ಪತ್ರ ನೀಡಿ ಅನುಮತಿ ನೀಡಿರುವುದು ಸಂಶಯ ಹುಟ್ಟಿಸುವಂತಿದೆ. ಕೂಡಲೇ ಎಲ್ಲರಿಗೂ ಒಂದೇ ರೀತಿಯ ಕಾನೂನು ಮತ್ತು ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.
ಬಶೀರ್
ಕೈಕೋ ನಿವಾಸಿ
ಸಚಿವ ಖಾದರ್ ಭೇಟಿ
ಕೋಟೆಪುರ, ಮೊಗವೀರಪಟ್ನ, ಕೈಕೋ, ಹಿಲೆರಿಯಾನಗರ, ಸೋಮೇಶ್ವರದ ಭಾಗದಲ್ಲಿ ಕಡೆಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿ ಆರಂಭವಾಗಿದೆ. ಸಂಪೂರ್ಣ ಕಾಮಗಾರಿ ಮುಗಿದಿಲ್ಲ,. ಇದರಿಂದ ಅಲ್ಲಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ಎಲ್ಲಿ ಸಮುದ್ರದ ಅಲೆಗಳು ಹೆಚ್ಚಾಗುತ್ತದೆ ಎಂದು ಹೇಳಲು ಅಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯರ ಅಭಿಪ್ರಾಯ ಪಡೆದುಕೊಳ್ಳಲು ಸೋಮವಾರ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಭೆ ನಡೆಸಲು ಸೂಚಿಸುವುದಾಗಿ ತಿಳಿಸಿದ ಅವರು ಅವಶ್ಯಕತೆಯಿದ್ದಲ್ಲಿ ತುರ್ತಾಗಿ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ಸ್ಥಳಾಂತರಿಸಲು ಎಲ್ಲಾ ರೀತಿಯ ಸೌಕರ್ಯ, ಅನುದಾನವನ್ನು ಒದಗಿಸಲಾಗುವುದು. ಈಗಾಗಲೇ ಒಂದು ಹಂತದ ಶಾಶ್ವತ ತಡೆಗೋಡೆ ಕಾಮಗಾರಿ ನಿರ್ಮಾಣವಾಗಿದೆ. ಸದ್ಯ ಸಮುದ್ರದ ಅಲೆಗಳು ಹೆಚ್ಚಿರುವ ಕೈಕೋ ಸುತ್ತಮುತ್ತ ಪ್ರದೇಶಕ್ಕೆ ಶೀಘ್ರವೇ ಹೊಸ ಬಮ್ ್ ಗಳನ್ನು ಹಾಕಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದರು. ಉಳ್ಳಾಲ ಸೋಮೇಶ್ವರ, ಉಚ್ಚಿಲ ಪ್ರದೇಶಕ್ಕೂ ಭೇಟಿ ನೀಡಿದ ಸಚಿವರು ಸಮುದ್ರ ಬದಿ ವೀಕ್ಷಣೆ ನಡೆಸಿದರು.
ಈ ವೇಲೆ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಜಬ್ಬಾರ್ ಬೋಳಿಯಾರ್, ಸಿರಾಜ್ ಕಿನ್ಯಾ, ಮೊದಲಾದವರು ಉಪಸ್ಥಿತರಿದ್ದರು.