Site icon Ullalavani

ಕುಂಪಲ : ಕೊರಗಜ್ಜನ ತಾಯಿಗೂ ಗುಡಿ

ಉಳ್ಳಾಲ್ ನ್ಯೂಸ್ ನೆಟ್‍ವರ್ಕ್

ಉಳ್ಳಾಲ:ಪೂರ್ವ ಹಾಗೂ ಪಶ್ಚಿಮ ಎತ್ತರಾಗಿರುವುದರಿಂದ ಹೆಚ್ಚು ಶಕ್ತಿಯಿರುವ ಜಾಗ ನಡುಪೊಳಿಕೆ ಬಲ್ಯ ಆಗಿದ್ದು, ಈ ನಿಟ್ಟಿನಲ್ಲಿ ಸ್ಥಳದಲ್ಲಿ ಶ್ರೀ ಕೊರಪೊಳು ಮೈರೆಗೆ ನೂತನ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಸ್ಥಳದಲ್ಲಿ ಗುಡಿ ನಿರ್ಮಾಣ ಆಗುವವರೆಗೆ ಸ್ಥೂಲಶರೀರ ಕಾಪಾಡಬೇಕಿದೆ ಎಂದು ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಅವರು ಕುಂಪಲ ನಡುಪೊಳಿಕೆ ಬಲ್ಯದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಕೊರಪೊಳು ಮೈರೆ ನೂತನ ಗುಡಿ ನಿರ್ಮಾಣಕ್ಕೆ ಸೋಮವಾರ ಜರಗಿದ ಶಿಲಾನ್ಯಾಸ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಲಾನ್ಯಾಸ ನಡೆದಲ್ಲಿ ಮಹಿಳೆಯೊಬ್ಬಳು ಗರ್ಭಧಾರಣೆ ಆದಂತೆ. ಗರ್ಭಿಣಿ ಮಹಿಳೆಯನ್ನು ವೃತ ನಡೆಸಿ ಪೋಷಿಸಿದಂತೆ, ಶಿಲಾನ್ಯಾಸ ನಡೆದ ಸ್ಥಳದ ಜನರು ಗಡ್ಡಧಾರಿಯಾಗಿಯೋ ಅಥವಾ ಇಷ್ಟದ ಆಹಾರವನ್ನು ಗುಡಿ ನಿರ್ಮಾಣ ಆಗುವವರೆಗೆ ತ್ಯಜಿಸಿ ವೃತಾಚಾರಣೆಯಲ್ಲಿ ಪಾಲ್ಗೊಂಡು, ಗುಡಿ ನಿರ್ಮಾಣದಲ್ಲಿ ಶ್ರಮಿಸಬೇಕಿದೆ ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ಮಂಜೇಶ್ವರ ಹಾಗೂ ಉಳ್ಳಾಲದ ಧರ್ಮ ಜಾಗೃತಿ ವೇದಿಕೆ ಅಭಿಮಾನಿ ಬಳಗದ ಕೃಷ್ಣ ಶಿವಕೃಪಾ ಮಾತನಾಡಿ ತುಳುನಾಡಿನಲ್ಲಿರುವ ಶಕ್ತಿಗಳು ಈಶ್ವರ ದೇವರ ಶಕ್ತಿಗಳಾಗಿವೆ. ಮೇಲ್ಜಾತಿ, ಕೀಳು ಜಾತಿ ಇದ್ದಂತಹ ಸಂದರ್ಭ ಈಶ್ವರ ದೇವರು ಕೊರಗಜ್ಜನ ರೂಪ ತಾಳಿದರೆ, ಪಾರ್ವತಿ ದೇವಿ ಕೊರಪೊಳು ಆಗಿ ಜನರ ಸಂಕಷ್ಟಗಳನ್ನು ಶಕ್ತಿಯಿಂದ ದೂರವಾಗಿಸಿದವರು. ಭಾವನೆಗಳಿಗೆ ತಕ್ಕಂತೆ ದೈವಾನುಗ್ರಹ ಆಗಬೇಕಿದ್ದು, ಮನೆಗಳು ಭವನಗಳಾಗಲು ಭಗವಂತನ ಚಿಂತನೆಗಳ ಅಗತ್ಯತೆ ಇದೆ ಎಂದರು.

ಕುತ್ತಾರು ಶ್ರೀ ಪಂಜಂದಾಯ ದೈವಸ್ಥಾನದ ಬಾಲಕೃಷ್ಣ ಮೂಲ್ಯಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ನಡುಪೊಳಿಕೆ ಸ್ವಾಮಿ ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೆಂಕಪ್ಪ ಮೂಲ್ಯ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ಯ ಮಲರಾಯ ಧೂಮಾವತಿ ಹಾಗೂ ಬಂಟ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಬಾಬು ಶಾಸ್ತ ಕಿನ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಎ.ಸುಜೀತ್ ಆಳ್ವ ಏತಮೊಗೆರ್ ಗುತ್ತು , ಪ್ರಗತಿಪರ ಕೃಷಿಕ ಹಾಗೂ ಧಾರ್ಮಿಕ ಮುಂದಾಳು ಉಮೇಶ್ ಗಾಂಭೀರ್, ಬಿರುವೆರ್ ಕುಡ್ಲ ಸಂಘಟನೆಯ ಚಂದ್ರಹಾಸ್ ಪಂಡಿತ್ ಹೌಸ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ನವೀನ್ ಕನೀರುತೋಟ, ಶಿಲ್ಪಿಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.

ಪಿ.ಡಿ.ಶೆಟ್ಟಿ ಸ್ವಾಗತಿಸಿದರು. ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಶೇಖರ ಕನೀರುತೋಟ ವಂದಿಸಿದರು.

Exit mobile version