ಉಳ್ಳಾಲ :ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಅಪರಾಧ ವಿಭಾಗದ ಉಪ ನಿರೀಕ್ಷಕರ ಜೀಪಿಗೆ ಟಿಪ್ಪರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಸೋಮೇಶ್ವರ ಬಳಿ ಸೋಮವಾರ ಬೆಳಗ್ಗಿನ ಜಾವ ನಡೆದಿದ್ದು, ಜೀಪಿನಲ್ಲಿದ್ದ ಎಸ್ಐ ಸಹಿತ ಚಾಲಕ ಪವಾಡಸದೃಶ್ಯವಾಗಿ ಪಾರಾಗಿದ್ದು, ಟಿಪ್ಪರನ್ನು ಕೊಲ್ಯ ಬಳಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪರಾಧ ವಿಭಾಗದ ಉಪ ನಿರೀಕ್ಷಕ ಮೋಹನ್ದಾಸ್ ಸಂಚರಿಸುತ್ತಿದ್ದ ಜೀಪಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಚಾಲಕ ಕಾನ್ಸ್ಟೇಬಲ್ ಪ್ರಶಾಂತ್ ಮತ್ತು ಮೋಹನ್ ದಾಸ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪೋಲಿಸರ ವಾಹನಕ್ಕೆ ಡಿಕ್ಕಿ ಹೊಡೆಸಿದ ಚಾಲಕ ಬೆದರಿ ಟಿಪ್ಪರನ್ನು ನಿಲ್ಲಿಸದೆ ಪರಾರಿಯಾಗಿದ್ದು ಬಳಿಕ ಟಿಪ್ಪರನ್ನು ಕೊಲ್ಯದಲ್ಲಿ ವಶಕ್ಕೆ ತೆಗೆದುಕೊಂಡರು. ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.