Site icon Ullalavani

ಮೋದಿ ಸರಕಾರದಿಂದ ಮಹಿಳೆಯರು ಕಷ್ಟದ ದಿನಗಳನ್ನೇ ಎದುರಿಸುತ್ತಿದ್ದಾರೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಮೋದಿ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ಮಹಿಳೆಯರು ಕಷ್ಟದ ದಿನಗಳನ್ನೇ ಎದುರಿಸುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಜಯಂತಿ ಶೆಟ್ಟಿ ಹೇಳಿದ್ದಾರೆ.

ಅವರು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಯುವ ಜನಾಂಗ ಇಂದು ದಿಕ್ಕೆಟ್ಟು ಹೋಗಿದೆ. ಬದುಕಿಗೆ ಆಸರೆ, ನೆಮ್ಮದಿ ಸಿಗುತ್ತಿಲ್ಲ. ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಯುವತಿಯರು ಉದ್ಯೋಗ ವಂಚಿತರಾಗಿದ್ದಾರೆ. ಉದ್ಯೋಗದ ಹಕ್ಕಿಗಾಗಿ ಎಲ್ಲರೂ ಹೋರಾಡಬೇಕಾಗಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡಿಸೀಲ್ ಬೆಲೆಯೂ ನಿರಂತರ ಏರಿಕೆಯಾಗುತ್ತಲೇ ಇದೆ. ಶ್ರೀಮಂತರ ಪರವಾಗಿ ಕಾರ್ಯಾಚರಿಸುತ್ತಿರುವ ಸರಕಾರಗಳ ವಿರುದ್ಧ ಎಚ್ಚೆತ್ತು ಜನ ಹೋರಾಡದಿದ್ದಲ್ಲಿ, ಮುಂದಿನ ದಿನಗಳಲ್ಲಿ ಎಲ್ಲರೂ ಬೀದಿಪಾಲಾಗುವುದರಲ್ಲಿ ಸಂಶಯವಿಲ್ಲ ಎಂದರು.

ಜೆ.ಎಂ.ಎಸ್ ಜಿಲ್ಲಾ ಸಂಚಾಲಕಿ ಪದ್ಮಾವತಿ.ಯಸ್.ಶೆಟ್ಟಿ ಮಾತನಾಡಿ ಜಾತ್ಯಾತೀತ ಪಕ್ಷಗಳು ಬೆಲೆ ಏರಿಕೆಯನ್ನು ನಡೆಸುತ್ತಲೇ ಬಂದಿದೆ. ಕೇರಳ ರಾಜ್ಯದಲ್ಲಿ ಬಡವರಿಗೆ 14 ಬಗೆಯ ಆಹಾರ ರೇಷನ್ನಿನಲ್ಲಿ ದೊರೆಯುತ್ತಿದೆ. ಬೇರೆ ಎಲ್ಲಿಯೂ ದೊರೆಯದೆ ಬಡವರ ಕುರಿತು ಕಾಳಜಿಯಿಲ್ಲದಂತಾಗಿದೆ ಎಂದರು.
ಉಳ್ಳಾಲ ಸಮಿತಿ ಅಧ್ಯಕ್ಷೆ ನಳಿನಾಕ್ಷಿ ಉಳ್ಳಾಲಬೈಲು, ಉಳ್ಳಾಲ ವಲಯ ಕಾರ್ಯದರ್ಶಿ ಸೌಮ್ಯ ಸಂಜೀವ್, ಪ್ರಮೋದಿನಿ ಕಲ್ಲಾಪು, ಪುಷ್ಪಾ ಲಕ್ಷ್ಮೀಗುಡ್ಡೆ, ಬೇಬಿ ಲಕ್ಷ್ಮಿಗುಡ್ಡೆ, ಕೋಟೆಕಾರು ಪಟ್ಟಣಪಂಚಾಯತ್ ಸದಸ್ಯೆ ಸುಮತಿ, ಜೆ.ಎಂ.ಎಸ್ ಉಳ್ಳಾಲ ವಲಯ ಕೋಶಾಧಿಕಾರಿ ವಿಲಾಸಿನಿ ತೊಕ್ಕೊಟ್ಟು, ಮೀನಾಕ್ಷಿ ಕುತ್ತಾರು, ಜಯಂತಿ ಉಳ್ಳಾಲಬೈಲು ಉಪಸ್ಥಿತರಿದ್ದರು.

Exit mobile version