ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಅಲ್ಲಿ ಆದೆಷ್ಟೋ ವರ್ಷಗಳ ನಂತರದ ಭೇಟಿಯ ಸಂಭ್ರಮವಿತ್ತು, ಸಹಪಾಠಿಗಳ ಜೊತೆ ಕಾಲೇಜು ದಿನಗಳಲ್ಲಿ ಬೆರೆತ ಆದೆಷ್ಟೋ ನೆನಪುಗಳನ್ನು ಮೆಲುಕು ಹಾಕುತ್ತಾ, ನೆನಪಿನ ಜೊತೆಗೆ ಕಣ್ಣಂಚಿನಲ್ಲಿ ಅದೆಲ್ಲೋ ಅಲ್ಪ ಸಲ್ಪ ಕಣ್ಣೀರು, ಹಳೆಯ ಗೆಳತನದ ಜೊತೆಗೆ ಹೊಸ ನಗುವಿನೊಂದಿಗೆ ಎಲ್ಲೋ ಇದ್ದ ಸಹಪಾಠಿಗಳ ಪುನರ್ ಮಿಲನಕ್ಕೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳ ಸಭಾಂಗಣ ದಲ್ಲಿ ಭಾನುವಾರ ಜರಗಿದ `ಸಂಗಮಾ’ ಮಂಗಳೂರು ವಿ.ವಿಯ ಹಳೇ ವಿದ್ಯಾರ್ಥಿಗಳ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮ ಸಾಕ್ಷಿಯಾಯಿತು.
ಕಾರ್ಯಕ್ರವನ್ನು ಉದ್ಘಾಟಿಸಿದ ಕಲ್ಲಿಕೋಟೆ ಹಾಗೂ ಕಣ್ಣೂರು ವಿಶ್ವವಿದ್ಯಾಲಯದ ನ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರೆಹೆಮಾನ್ ಬಹಳ ವರ್ಷಗಳ ಹಿಂದೆ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಇಂದಿನ ವಿಶ್ವವಿದ್ಯಾನಿಯಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ. ಶೈಕ್ಷಣಿಕ, ಸಾಂಸ್ಕøತಿಕ ಬದಲಾವಣೆಯ ಜತೆಗೆ ವಿನ್ಯಾಸದಲ್ಲೂ ಬದಲಾವಣೆಯಾಗಿದೆ. 35 ವರ್ಷಗಳ ಹಿಂದೆ ಕೊಣಾಜೆ ವಿಶ್ವವಿದ್ಯಾನಿಯದಲ್ಲಿ ಈಗ ಇರುವ ಹಾಗೆ ವಾಹನಗಳ ವ್ಯವಸ್ಥೆ ಇರಲಿಲ್ಲ. ಪ್ರಸ್ತುತ ಇರುವ ವಿಜ್ಞಾನ ಕೇಂದ್ರ ಕಟ್ಟಡದ ಬಳಿ ಕೇವಲ ಒಂದೇ ಮರವಿದ್ದಿತ್ತು. ಅಂದು ತೊಕ್ಕೊಟು ಹಾಗೂ ಕುತ್ತಾರು ಪ್ರದೇಶಕ್ಕೆ ರಸ್ತೆಯೇ ಇರಲಿಲ್ಲ. ಕೋಟೆಕಾರು ಬೀರಿ ಮೂಲಕ ಕೊಣಾಜೆಗೆ ಇದ್ದಂತಹ ಸಿಪಿಸಿ, ಭಾರತ್ ಹಾಗೂ ವಜ್ರೇಶ್ವರಿ ಹೆಸರಿನ ಕೇವಲ ಮೂರೇ ಬಸ್ಸುಗಳು ಎಂದಿಗೂ ಸ್ಮರಣೀಯ. ಅದರಲ್ಲಿ ಪ್ರಯಾಣಿಸಿ ಕ್ಲಾಸುಗಳಲ್ಲಿ ಕುಳಿತು ಕೊಳ್ಳಲು ಕುರ್ಚಿ ಮೇಜುಗಳ ವ್ಯವಸ್ಥೆ ಇರಲಿಲ್ಲ. ಕೊಣಾಜೆ ತುಂಬಾ ದೂರ ಹಾಗೂ ವಾಹನಗಳ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಯಾವ ಉಪನ್ಯಾಸಕರು ಒಪ್ಪದ ಸ್ಥಿತಿಯಿತ್ತು. ಆದರೆ ಇಂದು ಮಂಗಳೂರು ವಿವಿ ದೇಶದ ಎಲ್ಲಾ ವಿವಿಗಳ ಸಾಲಿನಲ್ಲಿ ಮುಂದುವರೆದು ವಿದೇಶದಲ್ಲೂ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಅದರಲ್ಲೂ ಹಳೆ ವಿದ್ಯಾರ್ಥಿಗಳು ಜೊತೆಗೆ ಸೇರುವಂತಹ ಕಾಯಕ್ರಮ ಶ್ಲಾಘನೀಯ. ಅಲ್ಯುಮಿನಿ ಅಸೋಸಿಯೇಷನ್ ಅಭಿವೃದ್ಧಿ ಹೊಂದಿದ್ದಲ್ಲಿ , ಅದು ನ್ಯಾಕ್ ಮಾನ್ಯತೆಯನ್ನೂ ಪಡೆಯುವಲ್ಲಿ ಸಹಕಾರಿಯಾಗುವುದು. ಹಲವು ವಿ.ವಿಗಳು ಕೇವಲ ನ್ಯಾಕ್ ಮಾನ್ಯತೆಗೆ ಹಳೇ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸುತ್ತಿದೆ. ಇಂತಹ ಸಂಘಗಳಲ್ಲಿ ಹಣದ ಕ್ರೋಢೀಕರಣದ ಜತೆಗೆ ಮೌಲ್ಯಯುತವಾದ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿಯಾಗಬೇಕಿದೆ ಎಂದರು.
ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅನಂತ ಕೃಷ್ಣ ಮಾತನಾಡಿ ಮನುಷ್ಯ ಕಲಿತು ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ ಆತ ಕಲಿತ ಶಾಲೆ ಅಥವಾ ಕಾಲೇಜಿಗೆ ಬರುವಾಗ ಮತ್ತೆ ವಿದ್ಯಾರ್ಥಿಯ ಅನುಭವದ ಜೊತೆಗೆ ಭಾವನೆಗಳನ್ನು ಹೊರಹೊಮ್ಮಲು ಸಾಧ್ಯ. ಅದೇ ಭಾವನೆಯಿಂದ ಹಳೆ ವಿದ್ಯಾರ್ಥಿ ಸಂಘÀ ಸ್ಥಾಪನೆಯಾಗಿದೆ. 1968 ರ ಮೈಸೂರು ವಿಶ್ವವಿದ್ಯಾನಿಲಯದ ಒಂದು ಅಧ್ಯಯನ ಸಂಸ್ಥೆಯಾಗಿ ಮಂಗಳಗಂಗೋತ್ರಿ ಅಧ್ಯಯನ ಕೇಂದ್ರ ಕೊಣಾಜೆಯಲ್ಲಿ ಸ್ಥಾಪನೆಗೊಂಡಿತ್ತು. ಕ್ರಮೇಣ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಕನ್ನಡ, ಗಣಿತಶಾಸ್ತ್ರ ಮತ್ತು ಭೌತ ಶಾಸ್ತ್ರದ ಸ್ನಾತಕೋತ್ತರ ವಿಭಾಗಗಳು ಮೊದಲಿಗೆ ಕಾರ್ಯಾಚರಿಸಲು ಆರಂಭಿಸಿತು. ಕಟ್ಟಡಗಳು ಇಲ್ಲದಿದ್ದರೂ ಮೌಲ್ಯಯುತ ಶಿಕ್ಷಣಕ್ಕೆ ಯಾವುದೇ ಕೊರತೆಯಿರಲಿಲ್ಲ. ಅದೇ ಕಾರಣಕ್ಕೆ ಜಿಲ್ಲೆಯಿಂದ ಹೊರಗೆ ಹೋದಾಗ ಮಂಗಳೂರಿನ ವಿದ್ಯಾಭ್ಯಾಸ , ಬ್ಯಾಂಕಿಂಗ್ ವ್ಯವಸ್ಥೆ, ಅತಿಥಿ ಸತ್ಕಾರ, ಹೊಟೇಲುಗಳು ಶ್ಲಾಘನೆಗೆ ಪಾತ್ರವಾಗಿದೆ. 6 ವೈದ್ಯಕೀಯ ಕಾಲೇಜುಗಳು, 12 ಇಂಜಿನಿಯರಿಂಗ್ ಕಾಲೇಜುಗಳು 200 ಕ್ಕೂ ಅಧಿಕ ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಕಾಲೇಜುಗಳು ಇರುವ ದಕ್ಷಿಣ ಕನ್ನಡ ಜಿಲ್ಲೆ ದೇಶಲ್ಲಿಯೇ ನಂಬರ್ ಒನ್ ಅನಿಸಿದೆ. ಇದರ ಕೀರ್ತಿ ಮಂಗಳೂರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ದೇಶದ ಯಾವುದೇ ಭಾಗಕ್ಕೆ ಹೋಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ಹೇಳಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಬ್ಯಾಂಕಿಂಗ್ನಲ್ಲಿ 1905 ರಿಂದ 1945ರ ವರಗೆ ಈ ಜಿಲ್ಲೆಯಲ್ಲಿ 22 ಬ್ಯಾಂಕ್ ಗಳಿದ್ದವು. ಆನಂತರ ಮಿಲನ ಹೊಂದಿ 5 ಬ್ಯಾಂಕ್ ಉಳಿಯಿತು. ಅವುಗಳಲ್ಲಿ 4 ರಾಷ್ಟ್ರೀಯ ಬ್ಯಾಂಕ್ ಗಳಾಗಿ ಪರಿವರ್ತನೆಹೊಂದಿತ್ತು. ಭಾರತದಂತಹ ದೇಶದಲ್ಲಿ ಒಂದೇ ಜಿಲ್ಲೆಯಿಂದ 4 ರಾಷ್ಟ್ರೀಕೃತ ಬ್ಯಾಂಕ್ಗಳನ್ನು ನೀಡಿದ ಕೀರ್ತಿ ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುವ ಮೂಲಕ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯನ್ನು ಜಿಲ್ಲೆ ನೀಡಿದೆ ಅನ್ನುವುದು ಹೆಮ್ಮೆಯ ವಿಚಾರವಾಗಿದೆ.
ಟಯರ್ ಪಂಕ್ಚರ್ ಮಾಡಿದವರು ನೀವೇನಾ ?
ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಮೀಷನರ್ ವಿಜಯಪ್ರಕಾಶ್ ಅವರು ಮಂಗಳೂರು ವಿ.ವಿ.ಯ ಹಳೇ ವಿದ್ಯಾರ್ಥಿ. ಸನ್ನಿವೇಶವೊಂದನ್ನು ವಿವರಿಸಿದ ಅವರು ` ಹಿಂದೆ ಪ್ರೊಫೆಸರ್ ಓರ್ವರನ್ನು ಭೇಟಿ ಮಾಡಲು ಹೊರಟಾಗ, ಅವರು ಉತ್ತಮವಾಗಿಯೇ ಬರಮಾಡಿಕೊಂಡರು. ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡವರು ನೀವು, ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದೀರೆಲ್ಲಾ ಅಂತೆಲ್ಲಾ ಹೊಗಳಿದರು. ಕಡೆಯದಾಗಿ ವಿಶ್ವವಿದ್ಯಾನಿಲಯದ ಹೆಸರು ಪ್ರಸ್ತಾಪಿಸಿದಾಗ , ಬ್ಯಾಚ್ ನ ವರ್ಷವನ್ನು ಪ್ರೊಫೆಸರ್ ಕೇಳಿದ್ದರು. ವರ್ಷ ಹೇಳುತ್ತಿದ್ದಂತೆ ಅಯ್ಯೋ ಆವತ್ತು ಟಯರ್ ಪಂಕ್ಚರ್ ಮಾಡಿದವರು ನೀವೇನಾ ಅಂತಹ ಪ್ರೊಫೆಸರ್ ಕೇಳುತ್ತಿದ್ದಂತೆ , ಅವರ ಕಚೇರಿಯಿಂದ ಕಾಲ್ಕಿತ್ತೆನು’ ಎಂದು ವಿ.ವಿಯಲ್ಲಿ ಕಲಿಯುವ ವೇಳೆ ನಡೆಸಿದ ತುಂಟತನವನ್ನು ಹೇಳಿಕೊಂಡರು.
ಮಂಗಳೂರು ವಿ.ವಿ ಕುಲಸಚಿವ ಡಾ.ಕೆ.ಎಂ.ಲೋಕೇಶ್, ಮಾಮ್ನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಮುಖ್ಯ ಅತಿಥಿಗಳಾಗಿದ್ದರು.
ಹಳೇ ವಿದ್ಯಾರ್ಥಿ ಸಂಘದ ಸದಸ್ಯ ವೇಣುಶರ್ಮ `ಮಾ’ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರೊ. ಧರ್ಮ ಅತಿಥಿಗಳನ್ನು ಪರಿಚಯಿಸಿದರು.
ಮಧುಸೂದನ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಹಾಸ್.ಕೆ ವಂದಿಸಿದರು.
ಇದೇ ಸಂದರ್ಭ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘದ ಮಾಮ್. ಕಾಂ ಎಂಬ ವೆಬ್ಸೈಟನ್ನು ಮಾ ಇದರ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಲೋಕಾರ್ಪಣೆ ಗೊಳಿಸಿದರು.
ರಾಜಕಾರಣಕ್ಕೆ ಏರಲು ಮಂಗಳೂರು ವಿ.ವಿಯಲ್ಲಿ ಕಲಿತ ಪಾಠವೂ ಕಾರಣವಾಯಿತು. ಇಲ್ಲಿನ ಆದರ್ಶಯುತ ಕಲಿಕೆ, ವಿದ್ಯಾರ್ಥಿಗಳ ಜತೆಗಿನ ಬೆರೆಯುವಿಕೆಯಿಂದ ಜನಪ್ರತಿನಿಧಿಯಾಗಲು ಸಾಧ್ಯವಾಯಿತು. ಅಂತಹ ದಿನಗಳನ್ನು ಮತ್ತೆ ಮೆಲುಕು ಹಾಕುವಂತಹ ಕಾರ್ಯಕ್ರಮವನ್ನು ಒದಗಿಸಿಕೊಟ್ಟಂತಹ ಹಳೇ ವಿದ್ಯಾರ್ಥಿ ಸಂಘದ ಕಾರ್ಯ ಶ್ಲಾಘನಾರ್ಹ
ನಿಂಗಯ್ಯ
ಮಾಜಿ ಸಚಿವ ಹಾಗೂ ಮೂಡಿಗೆರೆ ಶಾಸಕ