Site icon Ullalavani

ಉಳ್ಳಾಲ:ಗೇರು ಕೃಷಿ ಮೇಳ-2017

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಲಾಭದಾಯಕ ಕೃಷಿಯನ್ನು ಮಾಡುವ ಬಗ್ಗೆ ರೈತರು ಒಲವು ತೋರಿಸಬೇಕಿದ್ದು. ಕೇವಲ ಒಂದೇ ಕೃಷಿಯಲ್ಲದೇ ಸಮಗ್ರ ಕೃಷಿಪದ್ಧತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ಪಾಧನೆಯನ್ನು ದ್ವಿಗುಣಗೊಳಿಸುವ ಬಗ್ಗೆ ಕೃಷಿಕರು ಚಿಂತಿಸಬೇಕಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ವಾಸುದೇವಪ್ಪ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ,ಉಳ್ಳಾಲ ಕಾಪಿಕಾಡುವಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಬ್ರಹ್ಮವಾರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರ , ಕೊಚ್ಚಿನ್ ನ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯ ,ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ,ದ.ಕ ಮತ್ತು ಉಡುಪಿ ಜಿಲ್ಲೆಗಳ ತೊಟಗಾರಿಕೆ ಇಲಾಖೆ , ನವದೆಹಲಿಯ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಕೃಷಿ ಇಲಾಖೆ ಮತ್ತು ಆತ್ಮಯೋಜನೆ, ಮಂಗಳೂರು ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಮತ್ತು ರಾಜ್ಯ ಗೇರು ಉತ್ಪಾದಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ತೊಕ್ಕೊಟ್ಟು ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಜರಗಿದ ` ಗೇರು ಕೃಷಿ ಮೇಳ-2017, ಗೇರು ಕೃಷಿ ತರಬೇತಿ ಹಾಗೂ ಗೇರು ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಭತ್ತವನ್ನು ಮಾತ್ರ ಬೆಳೆಯುವುದು ಕೃಷಿ ಅಲ್ಲ ಅದರ ಜೊತೆ ದ್ವಿದಳ ಧಾನ್ಯವನ್ನು ಬೆಳೆಸಬೇಕು. ಕಡಿಮೆ ನೀರನ್ನು ಉಪಯೋಗಿಸಿಕೊಂಡು ಹೆಚ್ಚು ಇಳುವರಿ ಕೊಡುವ ತಳಿಯನ್ನು ಬೆಳೆಸುವಲ್ಲಿ ಕೃಷಿಕರು ಒಲವು ತೋರಿಸಬೇಕು. ಕೃಷಿಕರು ತಾವು ಬೆಳೆದ ಬೆಳೆಯಲ್ಲಿ 1ಲಕ್ಷ ಲಾಭ ಗಳಿಸಿದರೆ ಅದನ್ನು ಹೇಗೆ ದ್ವಿಗುಣಗೊಳಿಸಬಹುದು ಎಂಬ ಬಗ್ಗೆ ಯೋಚನೆ ಮಾಡಬೇಕು ಇದಕ್ಕೆ ಸಮಗ್ರ ಕೃಷಿಯನ್ನು ಬೆಳೆಸುವ ಬಗ್ಗೆ ರೈತರು ಚಿಂತನೆ ಮಾಡುವ ಮೂಲಕ ಅಂತರಬೆಳೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ ಎಂದ ಅವರು ಭಾರತ ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ವೇಗದಲ್ಲಿ ಮುನ್ನಡೆಯುತ್ತಿದ್ದು 10ಲಕ್ಷ ಹೆಕ್ಟೆರ್‍ನಷ್ಟು ಬೆಳೆಯನ್ನು ಬೆಳೆಯುತ್ತಿದ್ದು ಕರ್ನಾಟಕದಲ್ಲಿ 1.5 ಲಕ್ಷದಲ್ಲಿ ಹೆಕ್ಟೆರ್‍ನಲ್ಲಿ ರೈತರು ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದರು.

ಗೇರು ಕೃಷಿಯಲ್ಲಿ ಹೆಚ್ಚಿದ ಆಸಕ್ತಿ :

ಕಡೆಮೆ ನೀರನ್ನು ಉಪಯೋಗಿಸಿ ಬೆಳೆಸುವ ಕೃಷಿಯಲ್ಲಿ ಗೇರು ತಳಿಯು ಒಂದಾಗಿದ್ದು, ಇದು ಕೇವಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಈ ತಳಿಯನ್ನು ಬೆಳೆಸಲಾಗುತ್ತಿದೆ. ಗೇರುಹಣ್ಣಿನ ಉದುರಿದ ಎಲೆಗಳನ್ನು ಉಪಯೋಗಿಸಿಕೊಂಡು ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಉಪಯೋಗಿಸುವುದರಿಂದ ಹೆಚ್ಚು ಇಳುವರಿಯನ್ನು ಪಡೆಯಬಹುದು. ಗೇರು ಬೀಜಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹು ಬೇಡಿಕೆಇದೆ. ಒಂದು ಸಂದರ್ಭದಲ್ಲಿ ಯಾರಿಗೂ ಬೇಡವಾದ ಗೇರು ಕೃಷಿಯನ್ನು ಮಾಡಲು ಇದೀಗ ರಾಜ್ಯದ ಹಲವು ಜಿಲ್ಲೆಗಳು ಮುಂದೆ ಬಂದಿದೆ ಎಂದರು.

ಕೃಷಿ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ.ಕೆ.ನಾಯಕ್ ಮಾತನಾಡಿ ಆಹಾರ ಭದ್ರತೆಯ ಜೊತೆಗೆ ಪೋಷಕಾಂಶ ಭದ್ರತೆಯ ಬಗ್ಗೆಯೂ ವಿಜ್ಞಾನಿಗಳು ಗಮನಹರಿಸಬೇಕಿದೆ. ಗೇರು ಬೀಜದಲ್ಲಿ ಅಧಿಕ ಕೊಬ್ಬಿನಾಂಶ ಹಾಗೂ ಪ್ರೊಟೀನ್ ಇರುವ ಕಾರಣದಿಂದಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ದುಬಾರಿ ಬೆಲೆಯಿಂದ ದಿನನಿತ್ಯ ಸೇವನೆಗೆ ಇದು ಅಸಾಧ್ಯ. ಆದ್ದರಿಂದ ಗೇರು ಬೆಳೆ ವಿಸ್ತೀರ್ಣವನ್ನು ಹೆಚ್ಚು ಮಾಡಬೇಕು. 2000 ಎಕರೆಯಲ್ಲಿ ಗೇರುಬೀಜ ವಿಸ್ತರಣೆ ಮಾಡುವ ಬಗ್ಗೆ ಜನಪ್ರಿಯ ಕಾಯಕ್ರಮವನ್ನು ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿಯ ಊಟ, ಮೊಟ್ಟೆ ಹಾಲು ನೀಡುವ ರೀತಿಯಲ್ಲಿ ಗೇರು ಬೀಜವನ್ನು ನೀಡುವ ಮಟ್ಟಿಗೆ ಗೇರು ಕೃಷಿ ಅಭಿವೃದ್ದಿ ಹೊಂದಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಟ.ಎಚ್.ಗೌಡ ವಹಿಸಿ ಮಾತನಾಡಿದರು.
ಗೇರು ಬೆಳೆ ಮತ್ತು ಗೇರು ತೋಟದಲ್ಲಿ ಅಂತರ ಬೆಳೆಗಳ ಉತ್ಪಾದನಾ ತಾಂತ್ರಕತೆಗಳು ಎಂಬ ತಾಂತ್ರಿಕ ಕೈಪಿಡಿಯನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಕೆ.ಹುಸೇನ್ ಕುಂಞಮೋನು ಬಿಡುಗಡೆಗೊಳಿಸಿದರು.

ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇದರ ಸಹ ಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೇರು ನಿರ್ದೇಶನಾಲಯ ಪೂತ್ತೂರು ಇದರ ನಿರ್ದೇಶಕ ಡಾ.ಎಂ,ಗಂಗಾಧರ ನಾಯಕ್, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಶಿವಮೊಗ್ಗ ಇದರ ಸಹ ಸಂಶೋಧನಾ ನಿರ್ದೇಶಕ ಡಾ.ಮಂಜಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಯೋಜನಾಧಿಕಾರಿ ಉಮರಬ್ಬ, ಕೃಷಿ ಇಲಾಖೆ ಮಂಗಳೂರು ಇದರ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಉಪಸ್ಥಿತರಿದ್ದರು.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷಿಕರಾದ ಸುಭಾಶ್ಚಂದ್ರ ಶೆಟ್ಟಿ, ಅರವಿಂದ ಎಂ, ಪದ್ಮ ನಾಯ್ಕ್, ಅಬ್ದುಲ್ ಖಾದರ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕೃಷಿ ಮತ್ತು ಮತ್ತು ತೋಟಗಾರಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ಮುಖ್ಯಸ್ಥ ಡಾ.ಲಕ್ಷ್ಮಣ್ ಸ್ವಾಗತಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ವಿಷಯ ತಜ್ಞ ಡಾ.ಹರೀಶ್ ಶೆಣೈ ವಂದಿಸಿದರು.

Exit mobile version