ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಚ್ಚಿಲ: ಸಮಾಜಕ್ಕೆ ಉತ್ತಮ ಆರೋಗ್ಯವನ್ನು ಕಲ್ಪಿಸುವುದರ ಜೊತೆಗೆ ಜನಸಾಮಾನ್ಯರು ಕುಟುಂಬ ನಿರ್ವಹಣೆ ನಡೆಸಲು ಬೇಕಾದ ಉದ್ಯೋಗಾವಕಾಶಗಳನ್ನು ನೀಡುವಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಉತ್ತಮ ಕಾರ್ಯ ನಡೆಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಬೋವಿ ವಿದ್ಯಾ ಸಂಸ್ಥೆ ಇದರ ಸಹಯೋಗದೊಂದಿಗೆ ,ಉಚ್ಚಿಲದ ಬೋವಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದರು.
ಕಣಚೂರು ಆಸ್ಪತ್ರೆಯು ಸಮಾಜಕ್ಕೆ ಉತ್ತಮ ಆರೋಗ್ಯ ಭಾಗ್ಯ ನೀಡುವುದರ ಜತೆಗೆ ಪರಿಸರದ ಜನತೆಗೆ ಜೀವನ ನಿರ್ವಹಣೆಗೆ ಬೇಕಾದ ಉದ್ಯೋಗವನ್ನೂ ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.ಜನರ ಆರೋಗ್ಯದ ವಿಷಯದಲ್ಲಿ ವ್ಯಾವಹಾರಿಕವಗಿ ವರ್ತಿಸದೆ ,ಸೇವಾ ಮನೋಭಾವನೆ ಬೆಳೆಸಿ ,ಎಲ್ಲಾ ಗ್ರಾಮಗಳಲ್ಲೂ ವೈದ್ಯಕೀಯ ಶಿಬಿರಗಳನ್ನು ವಿಸ್ತರಿಸುವಂತಾಗಬೇಕು ಎಂದರು.
ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಣಕಾಸು ಮತ್ತು ಆಡಳಿತ ನಿರ್ದೇಶಕರಾದ ಅಬ್ದುಲ್ ರೆಹಮಾನ್ ಮಾತನಾಡಿ ,ಪರಿಸರದ ಎಲ್ಲಾ ಗ್ರಾಮಗಳ ಜನತೆಗೂ ತಮ್ಮ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ತಿಳಿಯಪಡಿಸುವ ದೃಷ್ಟಿ ಇರಿಸಿಕೊಂಡು ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದು ನಮ್ಮ ಸಂಸ್ಥೆಯು ನುರಿತ ವೈದ್ಯ ಸಮೂಹವನ್ನು ಹೊಂದಿದ್ದು ,ಈಗಲೂ ಸಮಾಜದ ಕಡು ಬಡವರಿಗೆ ಉಚಿತ ಸೇವೆಯನ್ನು ನೀಡುತ್ತಿರುವುದಾಗಿ ಹೇಳಿದರು.
ಕಣಚೂರು ಆಸ್ಪತ್ರೆಯ ಡೀನ್ ಡಾ.ಖಾಜ ನೆಸಿರುದ್ಧೀನ್ ,ಮೆಡಿಕಲ್ ಸುಪರಿಂಡೆಂಟ್ ಡಾ.ದೇವಿಪ್ರಸಾದ್ ,ಸಾರ್ವಜನಿಕ ಸಂಪರ್ಕಾಧಿಕಾರಿ ಶುಭಕರ ಅಂಚನ್ , ಮೂರೂರು ಬೋವಿ ಮಹಾಸಭಾದ ಅಧ್ಯಕ್ಷ ಪ್ರಕಾಶ್ ಯನ್ , ಸೋಮೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಉಚ್ಚಿಲ್ , ಪಂ. ಸದಸ್ಯ ಅರುಣ್ ಕುಮಾರ್ , ಉಚ್ಚಿಲ ಜುಮ್ಮಾ ಮಸೀದಿ ಖತೀಬರಾದ ಆದಮ್ ಮದನಿ ಮೊದಲಾದವರು ಇದ್ದರು.